ಭಟ್ಕಳ: ಮರಳು ಲಾರಿಗಳು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿಂತು ಹೆದ್ದಾರಿಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆ ಕೊಡುವುದಲ್ಲದೇ ಹೆದಾರಿ ಪಕ್ಕದಲ್ಲಿಯೇ ಮರಳು ದಂಧೆಯ ಅಡ್ಡೆಯನ್ನಾಗಿಸಿಕೊಂಡಿದ್ದಾರೆ.
ನಗರದ ರಂಗೀಕಟ್ಟೆಯಲ್ಲಿನ ಹೆದ್ದಾರಿಯು ಅತ್ಯಂತ ಕಿರಿದಾದ ಹಾಗೂ ಸದಾ ಅಪಘಾತವಾಗುವ ಪ್ರದೇಶವಾಗಿದೆ. ಕಳೆದ ಕೆಲವು ಸಮಯದ ಹಿಂದೆ ಮರಳುಗಾರಿಕೆಗೆ ಪರವಾನಿಗೆ ದೊರೆಯುತ್ತಲೇ ಇಲ್ಲೊಂದು ಮರಳು ಅಡ್ಡೆ ನಿರ್ಮಾಣವಾಗಿದೆ. ಹೆದ್ದಾರಿಯ ಪಕ್ಕದಲ್ಲಿಯೇ 8-10 ಲಾರಿಗಳು ನಿಂತು ಮರಳು ಮಾರಾಟದ ಅಡ್ಡೆಯನ್ನಾಗಿಸಿಕೊಂಡಿದ್ದು ಮರಳು ಬೇಕಾದವರು ಇಲ್ಲಿ ಬಂದು ಇವರಲ್ಲಿ ಚೌಕಾಶಿ ಮಾಡಿ ಮರಳು ಒಯ್ಯಬೇಕಾಗಿದೆ. ಇಲ್ಲಿಂದ ಮರಳು ಸಾಗಿಸಲು ಹಲವು ಎಜೆಂಟರು ಕೂಡಾ ಹುಟ್ಟಿಕೊಂಡಿದ್ದು ಮರಳು ಲಾರಿಯವರು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುತ್ತಿದ್ದರು ಸಹ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ದೂರು ಕೂಡಾ ಕೇಳಿ ಬಂದಿದೆ.
ವಾಹನಕ್ಕೆ ಜಿ.ಪಿ.ಎಸ್. ಅಳವಡಿಸಿದ್ದರಿಂದ ಎಲ್ಲೆಂದರಲ್ಲಿ ಸಂಚರಿಸಲು ಸಾಧ್ಯವಾಗದೇ ಇರುವುದರಿಂದ ಮರಳು ಲಾರಿಗಳನ್ನು ಹೆದ್ದಾರಿಯ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಇವರು ವ್ಯಾಪಾರವ ಕುದುರಿಸುವದರಿಂದ ಈ ಭಾಗದಲ್ಲಿ ಓಡಾಡುವುದೇ ಕಷ್ಟಕರವಾಗಿ ಪರಿಣಮಿಸಿದೆ. ಅತೀ ಹೆಚ್ಚಿನ ಅಪಘಾತಗಳು ಭಟ್ಕಳ ನಗರದ ನ್ಯಾಯಾಲಯದ ಆವರಣದಿಂದ ಶಂಶುದ್ಧೀನ್ ಸರ್ಕಲ್ ತನಕ ನಡೆಯುತ್ತಿದ್ದು ಅವುಗಳಲ್ಲಿ ಬಹುಪಾಲು ರಂಗೀಕಟ್ಟೆಯದ್ದೇ ಎಂದರೆ ತಪ್ಪಾಗಲಾರದು. ಅಂತಹ ಪ್ರದೇಶವನ್ನು ಇವರು ಮರಳು ಲಾರಿಗಳನ್ನು ಇಡಲು ಅಡ್ಡೆಯನ್ನಾಗಿಸಿಕೊಂಡಿದ್ದು ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವಾಹನ ನಿಲ್ಲಿಸಿಕೊಂಡು ಗಂಟೆಗಟ್ಟೆಲೆ, ದಿನಗಟ್ಟೆಲೆ ಗಿರಾಕಿಗಳು ಇಲ್ಲವೇ ಎಜೆಂಟರಿಗಾಗಿ ಕಾಯುವ ಇವರಿಗೆ ಅಕ್ಕ ಪಕ್ಕದ ಮನೆಗಳ ಕಂಪೌಂಡ್ ಗೋಡೆಯೇ ಕುಳಿತು ಕೊಳ್ಳುವ ಕುರ್ಚಿಗಳಾಗಿವೆ. ಪ್ರತಿ ದಿನವೂ ಇಲ್ಲಿ ಹತ್ತಾರು ಲಾಗಿಗಳು ನಿಲ್ಲುವುದರಿಂದ ರಸ್ತೆ ಪಕ್ಕದಲ್ಲಿ ಹೊಂಡಗಳು ಬಿದ್ದಿದ್ದು ದ್ವಿಚಕ್ರ ವಾಹನ ಓಡಾಟ ತೀರಾ ಕಷ್ಟಕರವಾಗಿದೆ. ಲಾರಿಗಳಿಲ್ಲದ ಸಮಯದಲ್ಲಿ ರಸ್ತೆಯ ಬಿಟ್ಟು ಸಂಚಾರ ಮಾಡಲಿಕ್ಕೂ ಆಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನಾದರೂ ಅಧಿಕಾರಿಗಳು ಗಮನ ಹರಿಸಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸದಂತೆ ನಿರ್ಬಂಧಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಹೆದ್ದಾರಿ ಅಪಘಾತವನ್ನು ತಪ್ಪಿಸಬೇಕು ಎನ್ನುವುದು ನಾಗರೀಕರ ಆಗ್ರಹವಾಗಿದೆ.