ಹಳಿಯಾಳ : - ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗಾಗಿ ಕಿಡ್ನಾಪ್ ಮಾಡಲು ಹೋಗಿ ಮೂವರು ಹಳಿಯಾಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ನವೆಂಬರ್ ಎರಡರಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ನಿನ್ನೆ ಗಂಗಾವತಿಯ ಬಾರ್ ಎಂಡ್ ರೆಸ್ಟೋರೆಂಟ್ ಸಿನಿಮೀಯ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಅಪಹರಿಸಿದ್ದರು. ಈ ಬಗ್ಗೆ ಗಂಗಾವತಿ ಠಾಣೆಯಲ್ಲಿ ಎಂಟು ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು.
ಈ ನಡುವೆ ಇಂದು ಹಳಿಯಾಳದ ಬಸವೇಶ್ವರ ಸರ್ಕಲ್ ಬಳಿ ವ್ಯಕ್ತಿಯೋರ್ವ. ಹೆಲ್ಪ್ ಮೀ ಎಂದು ಕೂಗಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ದಾರಿಮಧ್ಯೆ ಮನೋಹರ ಸ್ವಾಮೀ ಹಿರೇಮಠ ತಪ್ಪಿಸಿಕೊಂಡು ಬಂದಿದ್ದರು. ಅವರು ಮಾಹಿತಿ ನೀಡಿದ ಮೇರೆಗೆ ಮೂವರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಕೇಶ ಅಡಿವೆಪ್ಪ ನಾಯಕ (೨೪), ಬಸವರಾಜ ಮಲ್ಲಪ್ಪ ಉಪ್ಪಾರ (೨೨), ಶರಣಬಸು ಬಸವರಾಜ ವಂಕಲಕುಂಟೆ (೨೪) ಮತ್ತು ರವಿ ಕುರುಬರ ಅಪಹರಣ ಮಾಡಿದವರು. ಇವರಲ್ಲಿ ಓರ್ವ ಪರಾರಿಯಾಗಿದ್ದು, ಬಂಧನಕ್ಕಾಗಿ ಜಾಲ ಬೀಸಲಾಗಿದೆ.
ಮನೋಹರ್ ಸ್ವಾಮಿ ಅವರನ್ನು ರಕ್ಷಿಸಲಾಗಿದ್ದು, ಕಾರೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನ ಗಂಗಾವತಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.