ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ

Source: sonews | By Staff Correspondent | Published on 29th April 2020, 4:11 PM | Coastal News | Special Report |

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ 27 ದಿನಗಳ ಅವಧಿಯಲ್ಲಿ ಒಟ್ಟು 11 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು 300ಕ್ಕೂ ಅಧಿಕ ಮಂದಿಯನ್ನು ಈ ಸಂಬಂಧ ಕ್ವಾರೆನ್‍ಟೈನ್ ಮಾಡಲಾಗಿದ್ದು ಅವರು ತಮ್ಮ 14 ದಿನಗಳ ಅವಧಿಯನ್ನು ಪೂರ್ತಿಗೊಳಿಸಿ ತಮ್ಮ ತಮ್ಮ ಮನೆಗೆ ಹಿಂತಿರುಗಿದ್ದಾರೆ. ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಕೇವಲ ಒಂದು ಪ್ರಕರಣ ಮಾತ್ರ ಸಕ್ರಿಯವಾಗಿದ್ದು ಇನ್ನೆರಡು ದಿನಗಳಲ್ಲಿ ಅದು ಸಹ ನೆಗೆಟಿವ್ ವರದಿಯಾಗಿ ಕೊರೋನಾ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡುವ ನಿರೀಕ್ಷೆಯಿದೆ ಹಾಗಾಗಿ ಇನ್ನೆರಡದು ದಿನಗಳಲ್ಲಿ ಉ.ಕ ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರಿಸುವುದರ ಮೂಲಕ ಇಲ್ಲಿನ ಜನರು ಮೊದಲಿನಂತೆ ಬದುಕಲು ಅವಕಾಶ ದೊರೆಯುವುದೆಂಬ ಭರವಸೆಯಲ್ಲಿದ್ದಾರೆ.

ಜಗತ್ತಿನಾದ್ಯಂತ ಲಾಕ್‍ಡೌನ್ ಆರಂಭಗೊಂಡಾಗಲೆ ಪ್ರಪಂಚದ ಬೇರೆ ಬೇರೆ ಕಡೆ ವಾಸಿಸುತ್ತಿರುವ ಭಟ್ಕಳ ಮೂಲದ ನಾಗರೀಕರು ಭಟ್ಕಳ ತಲುಪುವ ಪ್ರಯತ್ನ ಕೈಗೊಂಡು ಕೆಲವೊಂದಿಷ್ಟು ಮಂದಿ ಭಟ್ಕಳಕ್ಕೆ ಬಂದು ಅದು ಗಲ್ಫ್ ರಾಷ್ಟ್ರಗಳಿಂದ ಹೆಚ್ಚು ಜನರು ಭಟ್ಕಳಕ್ಕೆ ಆಗಮನವಾಯಿತು. ಮಂಗಳೂರಿನ ದುಬೈಯಿಂದ ಭಟ್ಕಳಕ್ಕೆ ಬರುತ್ತಿದ್ದ ಯುವಕನ್ನು ಸ್ಕ್ರೀನಿಂಗ್ ಮಾಡಲಾಗಿ ಆತನಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಸಾಗಿಸಿ ಅತನನ್ನು ಎಲ್ಲೋ ಹೋಗಲು ಬಿಡದೆ ಮಂಗಳೂರಿನಲ್ಲಿಲ್ಲೆ ಕೂಡಿ ಹಾಕಿ ಚಿಕಿತ್ಸೆ ನೀಡಿದ್ದರ ಫಲವಾಗಿ ಕರಾವಳಿ ಭಾಗದಲ್ಲಿ ಮೊತ್ತ ಮೊದಲ ಗುಣಮುಖ ಹೊಂದಿದ ಪ್ರಕರಣವಾಗಿ ಗುರುತಿಸಿಕೊಂಡಿದ್ದು ಅಲ್ಲಿಂದ ಬೇರೆ ಬೇರೆ ದಿನದಂದು ಭಟ್ಕಳದಲ್ಲಿ ಗುರುತಿಸಿಕೊಂಡಿದ್ದ 10 ಪ್ರಕರಣಗಳು ಸಂಪೂರ್ಣವಾಗಿ ಗುಣಮುಖ ಹೊಂದಿದ್ದು ಒಂದು ಪ್ರಕರಣ ಮತ್ರ ಸಕ್ರಿಯ ಪ್ರಕರಣವಿದ್ದು ಒಂದು ವರದಿ ನೆಗೆಟಿವ್ ಆಗಿದ್ದು ಮತ್ತೊಂದು ವರದಿಗಾಗಿ ಕಾಯಲಾಗುತ್ತಿದೆ. ಅದಿನ್ನು ಎರಡು ದಿನಗಳೊಳಗಾಗಿ ಬರುತ್ತಿದ್ದು ಅದು ಕೂಡ ನೆಗೆಟಿವ್ ಆಗಿರುತ್ತದೆ ಎಂಬ ವಿಶ್ವಾಸವನ್ನು ವೈದ್ಯರು, ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 

ಜಾದು ಮಾಡಿದ ಜಿಲ್ಲಾಡಳಿತ: ಕೇವಲ 27 ದಿನಗಳಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣದಲ್ಲಿಟ್ಟು ಅದನ್ನು ಹತೋಟಿಗೆ ತಂದಿರುವ ಜಿಲ್ಲಾಡಳಿತ ನಿಜಕ್ಕೂ ಜಾದು ನಡೆಸಿದೆ ಎಂಬ ಪ್ರಸಂಶನೀಯ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಭಟ್ಕಳದಂತಹ ಅತಿ ಹೆಚ್ಚು ಜನ ಓಡಾಟ ಇರುವ ನಗರದಲ್ಲಿ ಮಾತ್ರ ಕೊರೋನಾ ಸೋಂಕು ಕಾಣಿಸಿಕೊಂಡು ತಾಲೂಕಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್, ಜಿ.ಪಂ. ಸಿ.ಇ.ಒ ಮುಹಮ್ಮದ್ ರೋಷನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜು ಅವರು ನಿರಂತರ ಶ್ರಮ  ಹಾಗೂ ಭಟ್ಕಳದ ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಸಹಾಯ ಸಹಕಾರದಿಂದಾಗಿ ಈ ಜಾದು ಸಾಧ್ಯವಾಯಿತು. ಇಲ್ಲದೆ ಹೋದರೆ ಭಟ್ಕಳದಂತಹ ಪ್ರದೇಶದಲ್ಲಿ ಇದು ಅಸಾಧ್ಯದ ಮಾತು. ಏಕೆಂದರೆ ಇಲ್ಲಿನ ಜನರನ್ನು ನಿಯಂತ್ರಿಸಲು ಅಷ್ಟು ಸುಲಭದ ಮಾತಲ್ಲ ಎಂದು ಹೇಳುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು. ತಂಝೀಮ್ ಸಂಸ್ಥೆಯು ಪದೇ, ಪದೇ ಸೂಚನೆ ನೀಡುವುದರ ಮೂಲಕ ಅವರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಅಲ್ಲದೆ ಇಲ್ಲಿನ ಇಬ್ಬರು ಪ್ರಧಾನ ಖಾಝಿಗಳು ಕೂಡ ತಮ್ಮ ವಿಡಿಯೋ ಸಂದೇಶದ ಮೂಲಕ ಕೊರೋನಾ ಮಹಾಮಾರಿಯ ಕುರಿತಂತೆ ಮಾತನಾಡಿ ಜನರನ್ನು ಮನೆಯಿಂದ ಹೊರಗಡೆ ಬರದಂತೆ ತೆಡೆಯೊಡ್ಡಿದರು. ಆ ಕಾರಣಕ್ಕಾಗಿ ಭಟ್ಕಳದಲ್ಲಿ ಕೇವಲ 27 ದಿನಗಳಲ್ಲಿ ಮಹಾಮಾರಿ ಕೊರೋನಾ ಹಿಡಿತಕ್ಕೆ ಬಂತು. ಇನ್ನೇನು ಈ ಜಿಲ್ಲೆ ಹಸಿರು ವಲಯ ಎಂದು ಘೋಷಿಸಿಕೊಳ್ಳಲಿದೆ. ಆದರೆ ವಲಯ ಹಸಿರಾದ ಮಾತ್ರಕ್ಕೆ ಇಲ್ಲಿನ ಆಡಳಿತ ಮಾತ್ರ ಇದನ್ನು ಅಷ್ಟು ಬೇಗನೆ ಸಡಿಲುಗೊಳಿಸಲು ಅಸಾಧ್ಯವೆಂಬ ಸಂದೇಶಗಳನ್ನು ಆಗಾಗ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ನೀಡುತ್ತ ಬಂದಿರುವುದು ಕಂಡರೆ ಭಟ್ಕಳದಲ್ಲಿ ಮಾತ್ರ ಮೇ ಕೊನೆಯವರೆಗೂ ಲಾಕ್‍ಡೌನ್ ನಿಯಮಗಳು ಜಾರಿಯಲ್ಲಿರಬಹುದೆಂದು ಅನುಮಾನಗಳು ಮೂಡಿ ಬರುತ್ತಿವೆ. 

ಲಾಕ್ ಡೌನ್ ನಂತರದ ಭಟ್ಕಳ ಹೇಗಿರಬಹುದು?: ಹೌದು ಇಂತಹದ್ದೊಂದು ಪ್ರಶ್ನೆ ಜನರಲ್ಲಿ ಈಗಾಗಲೆ ಮನೆಮಾಡಿಕೊಂಡಿದೆ. ಕೇಂದ್ರ ಸರ್ಕಾರ ಮೇ.3 ರ ತನಕ ಲಾಕ್‍ಡೌನ್ ಘೋಷಿಸಿದೆ. ಅದರ ನಂತರ ಏನು? ದೇಶದಾದ್ಯಂತ ಲಾಕ್ ಡೌನ್ ಸಂಪೂರ್ಣ ಸಡಿಲಿಕೆಯಾಗುತ್ತಾ? ಈ ಕುರಿತಂತೆ ಕೇಂದ್ರ ವಿವಿಧ ರಾಜ್ಯಗಳಿಗೆ ಮಾರ್ಗದರ್ಶನ ನೀಡಿದ್ದು ಅದರಂತೆ ರಾಜ್ಯಗಳು ತಮ್ಮ ಪರಿಸ್ಥಿತಿಯನ್ನು ನೋಡಿಕೊಂಡು ಎಲ್ಲಿ ಲಾಕ್ ಸಡಿಲಿಸಬೇಕು ಎಲ್ಲಿ ಜಾರಿಯಲ್ಲಿಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. 

ಮೇ 3 ನಂತರ ಲಾಕ್‍ಡೌನ್ ಹೇಗಿರಬಹುದು? : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಲಾಕ್‍ಡೌನ್ ನಲ್ಲಿ ಸಂಪೂರ್ಣ ಸಡಿಲಿಕೆಯಾಗುವ ನಿರೀಕ್ಷೆ ಇದೆ. ಆದರೆ, ಅನಾವಶ್ಯಕವಾಗಿ ನಗರ ಪ್ರದೇಶಗಳಿಗೆ ಜನರು ಬರುವುದನ್ನು ನಿಬರ್ಂಧಿಸುವ ಸಾಧ್ಯತೆ ಇದೆ. ಈ ಕೊರೋನಾ ಮಹಾಮಾರಿಯ ನಡುವೆ ಮಲೆನಾಡು/ ಗ್ರಾಮೀಣ ಭಾಗಗಳಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿರುವುದರಿಂದ ಅರಣ್ಯದಲ್ಲಿ ಜನರ ಓಡಾಟಕ್ಕೆ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಇನ್ನು ನಗರ ಪ್ರದೇಶಗಳಲ್ಲಿ ಅಂಗಡಿ- ಮುಂಗಟ್ಟುಗಳು, ದೈನಂದಿನ ಚಟುವಟಿಕೆಗಳು ಆರಂಭವಾಗಲಿದೆ ಎನ್ನಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಹಾಗೂ ಶುಚಿತ್ವ ಕಾಪಾಡಿಕೊಳ್ಳುವಿಕೆಯನ್ನು ಅನುಸರಿಸಬೇಕಿದೆ. ಜನರು ಗುಂಪುಗೂಡುವುದು ಹಾಗೂ ಅನಾವಶ್ಯಕವಾಗಿ ರಸ್ತೆಗಳಲ್ಲಿ ಅಡ್ಡಾಡುವುದಕ್ಕೆ ನಿಬರ್ಂಧ ಹೇರುವ ಸಾಧ್ಯತೆ ಇದೆ.

ಅಗತ್ಯ ವಸ್ತುಗಳನ್ನು ಮನೆಮನೆಗೆ ಪೂರೈಕೆ ಮಾಡುವುದನ್ನು ಜಿಲ್ಲಾಡಳಿತ ಮುಂದುವರಿಸುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಸಾಗಾಟ ಹೊರತುಪಡಿಸಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳುವುದನ್ನು ನಿಬರ್ಂಧಿಸಬಹುದು. ಪ್ರಯಾಣಿಕ ವಾಹನಗಳ ಓಡಾಟ ನಗರ ಪ್ರದೇಶದಲ್ಲಿ ವಿರಳವಾಗಿರುವ ಸಾಧ್ಯತೆ ಇರಲಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಲಾಕ್‍ಡೌನ್ ಕೀಲಿ ಕೈ: ಹೌದು ಉ.ಕ.ಜಿಲ್ಲೆಗೆ ಸಂಬಂಧಿಸಿದ ನಿರ್ಧಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿಯನ್ನು ನೀಡಲಾಗಿದ್ದು ಅವರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ಯೋಚಿಲಾಗುವುದೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈಗ ಜಿಲ್ಲೆಯ ಲಾಕ್‍ಡೌನ್ ತೆಗೆಯುವ ಕೀಲಿ ಕೈ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಇದ್ದು ಸೂಕ್ತ ಸಮಯದಲ್ಲಿ ಜಿಲ್ಲೆಗೆ ಜಡಿದ ಬೀಗವನ್ನು ತೆರೆಯಲಿದ್ದಾರೆ.                                                                                                                      *ಎಂ.ಆರ್.ಮಾನ್ವಿ.
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...