ಭಟ್ಕಳ: ತಾವು ಕಲಿತು ಬೆಳೆದ ಶಾಲೆಯ ಅಭಿವೃದ್ಧಿಯತ್ತ ಹಳೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಖಾಸಗಿ ಶಾಲೆಗಿಂತಲು ಉತ್ಕøಷ್ಠ ರೀತಿಯಲ್ಲಿ ಶಾಲಾ ಬೆಳವಣಿಗೆ ಸಾಧ್ಯವಾಗಲಿದೆ ಎಂಬುದಕ್ಕೆ ಮೂಢಭಟ್ಕಳ ಶಾಲೆಯೂ ಒಂದು ಉದಾಹರಣೆಯಾಗಿದೆ. ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರು, ದಾನಿಗಳು ಅತೀ ಶ್ರೇಷ್ಟರು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಗುರುವಾರದಂದು ಇಲ್ಲಿನ ಮೂಢಭಟ್ಕಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ಉದ್ಘಾಟನೆ ಹಾಗೂ ನಲಿ-ಕಲಿ ಪೀಠೋಪಕರಣಗಳ ಶಾಲಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಸರಕಾರಿ ಶಾಲೆಯೆಂದರೆ ಎಲ್ಲರು ಮೂಗು ಮೂರಿಯುವ ಸಂಧರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಮೊರೆ ಹೋಗಿ ಶಿಕ್ಷಣ ನೀಡಲು ಮುಂದಾಗುತ್ತಿದ್ದಾರೆ. ಹಾಗೂ ಸರಕಾರಿ ಶಾಲಾ ಶಿಕ್ಷಣದಿಂದ ಮಕ್ಕಳು ಶಿಕ್ಷಿತರಾಗಲು ಸಾಧ್ಯವಿಲ್ಲ. ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಎಂಬ ಅಜ್ಞಾನವನ್ನು ಇತ್ತಿಚಿನ ದಿನದಲ್ಲಿ ಸರಕಾರಿ ಶಾಲೆ ಹಾಗೂ ಅಲ್ಲಿನ ವಿದ್ಯಾರ್ಥಿಗಳು ಸುಳ್ಳು ಮಾಡುತ್ತಿದ್ದಾರೆ. ಕಾರಣ ಸರಕಾರಿ ಶಾಲೆಯೂ ಸಹ ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆಯಿಲ್ಲವೆಂಬಂತೆ ಅಭಿವೃದ್ಧಿ ಹೊಂದುತ್ತಿದೆ. ದೊಡ್ಡ ಸಾಧನೆ ಹಾಗೂ ಹುದ್ದೆಯಲ್ಲಿರುವವರೆಲ್ಲೂ ಸರಕಾರಿ ಶಾಲೆಯಿಂದಲೇ ಹೋಗಿರುವವರೇ ಆಗಿದ್ದಾರೆ. ಸರಕಾರಿ ಶಾಲೆಯ ಏಳಿಗೆಗೆ ಶ್ರಮಿಸಿದ, ದಾನ, ಕೊಡುಗೆ ನೀಡಿದರು ಶ್ರೇಷ್ಠರು. ಸರಕಾರದಿಂದಲೇ ಶಾಲೆಯ ಅಭಿವೃದ್ಧಿ ಸಾಧ್ಯವಾಗದೇ ಸಾರ್ವಜನಿಕ ವಲಯದಿಂದಲೂ ಸಹಾಯ, ಸಹಕಾರಿ ಸಿಕ್ಕಲ್ಲಿ ಶಾಲೆ ಇನ್ನಷ್ಟು ಮೇಲ್ದರ್ಜೆಗೆ ಏರಲು ಸಾಧ್ಯ. ಕ್ಷೇತ್ರದ 85% ಶಾಲೆಗೆ ಅನುದಾನ ಸಲ್ಲಿಕೆಯಾಗಿದ್ದು, ಇನ್ನು ಕೆಲವು ಶಾಲೆಯ ಕೊಠಡಿ ಸಮಸ್ಯೆಯಿದ್ದು ಮುಂದಿನ ದಿನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ‘ಮೂಢಭಟ್ಕಳ ಶಾಲೆ ಒಂದು ಪರಿಪೂರ್ಣವಾದ ಶಾಲೆಯಾಗಿದೆ. ನಮ್ಮ ಕಲಿಕೆಯ ವೇಳೆಯಲ್ಲಿ ಕಡ್ಡಿ ಪಾಠಿಯನ್ನು ಹೊತ್ತು ಶಾಲೆ ಹೋಗುವ ದಿನಗಳು ಬದಲಾಗಿ ಈಗ ಕಂಪ್ಯೂಟರ ಕಲಿಕೆಯ ತನಕ ಬೆಳೆದಿದೆ. ಮುಖ್ಯವಾಗಿ ಶಾಲಾ ಅಭಿವೃದ್ದಿಗೆ ಶಾಲಾಭಿವೃದ್ಧಿ ಹಾಗೂ ಪಾಲಕರ ಪಾತ್ರ ಪ್ರಮುಖವಾದದ್ದಾಗಿದೆ. ಈ ಸ್ಮಾರ್ಟ ಕ್ಲಾಸ್ ಆರಂಭದಿಂದ ಮಕ್ಕಳಲ್ಲಿ ಹೊಸದಾದ ಹುಮ್ಮಸ್ಸು ಬಂದಿದ್ದು, ಇದರ ಸದುಪಯೋಗವೂ ಸಮರ್ಪಕವಾಗಿ ಆಗಬೇಕಿದೆ ಎಂದು ಹೇಳಿದರು.
ಶಾಲೆಯ ಪ್ರಮುಖ ದಾನಿ ಹಾಗೂ ಉದ್ಯಮಿ, ಹಳೆ ವಿದ್ಯಾರ್ಥಿ ದಿನೇಶ ಭಟ್ ಮಾತನಾಡಿದ್ದು ‘ಒಂದು ಉದ್ದೇಶ, ಗುರಿಯಿಟ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬೇಕಿದೆ. ಉದ್ದೇಶವೂ ಸ್ಪಷ್ಟವಾಗಿದ್ದಲ್ಲಿ ನಾವು ಹೋಗುವ ದಾರಿ ಯಾವತ್ತು ನೆನಪಿಸುತ್ತದೆ. ನಮ್ಮನ್ನು ಅದರತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಪ್ರಮುಖ ದಾನಿ ಹಾಗೂ ಉದ್ಯಮಿ, ಹಳೆ ವಿದ್ಯಾರ್ಥಿ ದಿನೇಶ ಭಟ್, ಊರಿನ ನಿವೃತ್ತ ಸೈನಿಕ ನಾಗೇಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಕ್ರಪ್ಪ ನಾಯ್ಕ ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಮೀನಾಕ್ಷಿ ನಾಯ್ಕ, ಮುಠ್ಠಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ಜಟ್ಟಪ್ಪ ನಾಯ್ಕ, ಚಂದ್ರಹಾಸ ನಾಯ್ಕ, ಸಮನ್ವಯಾಧಿಕಾರಿ ಶ್ರೀಮತಿ ಅನಿತಾ, ಭಟ್ಕಳ ಅಗ್ನಿ ಶಾಮಕ ದಳ ಠಾಣಾಧಿಕಾರಿ ಎಸ್. ರಮೇಶ, ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಲಯ ದೈಹಿಕ ಪರಿವೀಕ್ಷಕರು(ಪ್ರ) ಪ್ರಕಾಶ ಶಿರಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕಿ ರಾಜೇಶ್ವರಿ ಹೆಗಡೆ ಸ್ವಾಗತಿಸಿದರೆ, ಸಹ ಶಿಕ್ಷಕಿ ಗೀತಾ ಶಿರೂರು ವಾರ್ಷಿಕ ವರದಿಯನ್ನು ವಾಚಿಸಿದರು.