ಭಟ್ಕಳ: ಮಾ.20 ರಂದು ದುಬೈನಿಂದ ಗೋವಾ ಮೂಲಕ ಭಟ್ಕಳಕ್ಕೆ ಬಂದಿದ್ದ 28 ವರ್ಷದ ಯುವಕನಲ್ಲಿ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಯುವಕ ವಾಸಿಸುತ್ತಿದ್ದ ಎನ್ನಲಾಗಿರುವ ಕಾಂಪ್ಲೆಕ್ಸ್ ನಲ್ಲಿ ಈಗ ಆತಂಕದ ಛಾಯೆ ಮನೆಮಾಡಿಕೊಂಡಿದೆ. ಕಾಂಪ್ಲೆಕ್ಸ್ ನಲ್ಲಿ ಒಂಬತ್ತು ಕುಟುಂಬಗಳು ವಾಸಿಸುತ್ತಿದ್ದು ಈಗ ಆ ಒಂಬತ್ತು ಮನೆಗಳಿಗೆ ಪೌರಕಾರ್ಮಿಕರು ಸೋಂಕು ನಿಯಂತ್ರಣಕ್ಕೆ ಔಷಧಿಯನ್ನು ಸಿಂಪಡಿಸುತ್ತಿದ್ದಾರೆ.
ಸೋಂಕಿತನ ಸಹೋದರ ಸಹ ದುಬೈನಲ್ಲಿದ್ದು ಇಬ್ಬರು ಒಟ್ಟಿಗೆ ವಿಮಾನದಲ್ಲಿ ಬಂದಿದ್ದರು. ಕಾರವಾರಕ್ಕೆ ಹೋಟೆಲ್ ಒಂದರಲ್ಲಿ ಕುಟುಂಬದ ಜೊತೆ ಗೋವಾ ವಿಮಾನ ನಿಲ್ದಾಣದಿಂದ ಆಗಮಿಸಿ ಉಪಹಾರ ಸ್ವೀಕರಿಸಿ ಭಟ್ಕಳಕ್ಕೆ ತೆರಳಿದ್ದರು.
ದುಬೈನಿಂದ ಬಂದ ನಂತರ ಇಬ್ಬರಲ್ಲಿ ಒರ್ವನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ. ನಾಲ್ಕು ದಿನದ ಹಿಂದೆ ಆತನಿಗೆ ಸೋಂಕು ಇರುವುದು ದೃಢಪಟ್ಟಿದ್ದು, ನಿನ್ನೆ ಮತ್ತೋರ್ವನಿಗೂ ಸೋಂಕು ಇರುವುದು ದೃಢಪಟ್ಟಿದೆ.
ಸೋಂಕಿತ ಯುವಕನ ನಿನ್ನೆಯ ವರೆಗೂ ಮನೆಯಲ್ಲಿಯೇ ವಾಸಿಸುತ್ತಿದ್ದ. ಕಾಂಪ್ಲೆಕ್ಸ್ ನಲ್ಲಿ ಒಂಬತ್ತು ಮನೆಗಳಲ್ಲಿ ಜನರು ವಾಸಿಸುತ್ತಿದ್ದು, ನಿನ್ನೆ ದೃಢಪಟ್ಟ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದ ತನ್ನ ಸಹೋದರನಿಗೆ ಊಟ ಕೊಡಲು ಪ್ರತಿನಿತ್ಯ ಹೋಗಿ ಬರುತ್ತಿದ್ದನಂತೆ. ಬೈಕ್ ನಲ್ಲಿ ಹೋಗಿ ಊಟ ಕೊಟ್ಟು ಬರುತ್ತಿದ್ದನಂತೆ. ಇದೀಗ ಆತನಿಗೂ ಕೊರೋನಾ ಇರುವುದು ದೃಢಪಟ್ಟಿರುವುದರಿಂದ ಕಾಂಪ್ಲೆಕ್ಸ್ ನಲ್ಲಿದ್ದ ಇತರೇ ಮನೆಯಲ್ಲಿರುವ ಜನರಲ್ಲಿ ಆತಂಕ ಎದುರಾಗಿದೆ.
ನಿನ್ನೆ ಕೊರೋನಾ ಸೋಂಕು ಇರುವುದು ದೃಢಪಟ್ಟ ತಕ್ಷಣ ವೈದ್ಯರು ಆತನನ್ನ ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪತಂಜಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಪೌರ ಕಾರ್ಮಿಕರು ಇಡೀ ಕಾಂಪ್ಲೆಕ್ಸ್ ನಲ್ಲಿ, ಮನೆಗಳ ಒಳಗೆ ಜೊತೆಗೆ ಸೋಂಕಿತ ಬಳಸುತ್ತಿದ್ದ ಬೈಕ್ ಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.