ರಾಜ್ಯದ ಜನತೆಗೆ ವೆಬ್ನಾರ್ ಮೂಲಕ ಸಂದೇಶದ ನೀಡಿದ ಧಾರ್ಮಿಕ ವಿದ್ವಾಂಸರು
ಬೆಂಗಳೂರು: ಜಗತ್ತಿನಲ್ಲಿ ಉದ್ಭವಿಸಿರುವ ದೈವಿಕ ವಿಪತ್ತು ಇಡೀ ಮನುಷ್ಯ ಕುಲವನ್ನೇ ನಡುಗಿಸುವಂತೆ ಮಾಡಿದ್ದು ವೈಜ್ಞಾನಿಕ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯ ನಡುವೆಯೂ ಮನುಷ್ಯ ಅಸಾಹಯಕನಾಗಿದ್ದಾನೆ ಇಂತಹ ಸಂದರ್ಭದಲ್ಲಿ ಮನುಷ್ಯ ತನ್ನಲ್ಲಿರುವ ಆಹಂ ಮತ್ತು ಅಹಂಕಾರವನ್ನು ತ್ಯಜಿಸಿ ತನ್ನ ನೈಜ ಸೃಷ್ಟಿಕರ್ತನ ಕಡೆಗೆ ಮರಳಬೇಕಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಧ್ಯಕ್ಷ ಡಾ.ಬೆಲ್ಗಾಮಿ ಮುಹಮ್ಮದ್ ಸಾದ್ ಕರೆ ನೀಡಿದರು.
ಅವರು ಭಾನುವಾರ ನಡೆದ ರಾಜ್ಯದ ವಿವಿಧ ಧಾರ್ಮಿಕ ವಿದ್ವಾಂಸರ ವೆಬ್ನಾರ್ ಸಂದೇಶದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ಸಾಂಕ್ರಮಿಕ ರೋಗವು ಸಾವಿರಾರು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಜನರ ನೈತಿಕ ಮತ್ತು ಆತ್ಮಸ್ಥೈರ್ಯವನ್ನು ವೃದ್ಧಿಸುವ ಕುರಿತಂತೆ ರಾಜ್ಯದ ಶರಣರು, ಮಠಾಧೀಶರು ಮತ್ತು ವಿದ್ವಾಂಸರು ಇಂದು ಕರೆ ನೀಡಿದ್ದು ಉತ್ತಮ ಬೆಳವಣೆಗೆಯಾಗಿದೆ ಎಂದ ಅವರು, ಪ್ರಸಕ್ತ ಸನ್ನಿವೇಶವನ್ನು ನಾವು ಧೈರ್ಯ ಮತ್ತು ಸ್ಥೈರ್ಯದಿಂದ ಎದುರಿಸಲು ಸೃಷ್ಠಿಕರ್ತನ ಮೊರೆ ಹೋಗಬೇಕು, ಕೇವಲ ಪ್ರಾರ್ಥನೆ ಪೂಜೆ ಮಾಡಿದರೆ ಸಾಲದು ಆತನನ್ನು ಅರಿಯುವ, ಅನುಸರಿಸುವ ಮತ್ತು ದೇವನ ಆದೇಶಗಳನ್ನು ಪಾಲಿಸುವುದು ಕಾಲದ ಬೇಡಿಕೆಯಾಗಿದೆ ಎಂದರು.
ಅಮೀರೆ ಶರೀಯತ್ ಕರ್ನಾಟಕ ಮೌಲಾನ ಸಗೀರ್ ಅಹ್ಮದ್ ರಶಾದಿ ಮಾತನಾಡಿ, ನಮ್ಮ ಕೆಟ್ಟ ಕರ್ಮಗಳಿಂದಾಗಿಯೇ ಜಗತ್ತಿನಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮನುಷ್ಯನ ಕೆಟ್ಟ ಕೆಲಸಗಳ ಪರಿಣಾಮ, ಚಾರಿತ್ರ್ಯಿಕ ಮತ್ತು ನೈತಿಕ ಅಧಪತನದತ್ತ ಕೊಂಡೊಯ್ಯುತ್ತಿದೆ. ದೇವನ ಮತ್ತು ಅನುಸರಣೆ ಮತ್ತು ಆರಾಧನೆಗಳಿಂದ ನಾವು ಎಲ್ಲ ರೀತಿಯ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎಂದರು.
ಬೇಲಿ ಮಠದ ಶ್ರೀ ಶಿವಾನುಭವ ಶಿವರುದ್ರ ಸ್ವಾಮಿಗಳು ಮಾತನಾಡಿ, ದೇವನ ಪರೀಕ್ಷೆಯಿಂದ ಶ್ರೀಮಂತ ಮತ್ತು ಬಡವ ಯಾರು ಕೂಡ ತಪ್ಪಿಕೊಳ್ಳಲಾರರು, ಆದ್ದರಿಂದ ಸೃಷ್ಟಿಕರ್ತನ ಕಡೆಗೆ ಮರಳುವಂತಾಗಲು ಇದು ಸೂಕ್ತ ಸಮಯ, ಕ್ವಾರೆಂಟೈನ್ ಮೂಲಕ ದೇವರೊಂದಿಗೆ ಹತ್ತಿರವಾಗು ಅವಕಾಶ ಲಭಿಸಿದೆ, ನಾವು ದೇವರ ಮುಂದೆ ಕೇವಲ ತೃಣಸಮಾನರಾಗಿದ್ದು ನಾನು ಎಂಬ ಆಹಮ್ಮಿನಿಂದ ಹೊರ ಬಂದು ಬದುಕುವುದನ್ನು ಕಲಿಯಬೇಕು, ಜಗತ್ತಿನ ಎಲ್ಲ ಜೀವಿಗಳು ದೇವರ ಸೃಷ್ಟಿಗಳು ನಾವೆಲ್ಲರು ಕೂಡಿ ಬಾಳುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆರ್ಚ್ ಬಿಷಪ್ ಬೆಂಗಳೂರು ರೇ. ಡಾ. ಪೀಟರ್ ಮಕೇಡೊ ಮಾತನಾಡಿ, ಎಲ್ಲರನ್ನು ಒಂದಾಗಿಸುವ ಪರಿಸ್ಥಿತಿಯನ್ನು ದೇವರು ನಿರ್ಮಾಣ ಮಾಡಿದ್ದಾನೆ. ಸೃಷ್ಟಿಕರ್ತನ ಮುಂದೆ ಎಲ್ಲರೂ ಸಮಾನರು ಎಂದರು.
ಶಿವಮೊಗ್ಗ ದ ಮುರುಗ ಮಠ ಶ್ರೀ ಮಹಾರಾಜ ನಿರಂಜನ ಜಗದ್ಗುರುಗಳು ಮಾತನಾಡಿ,ಸಾಂಕ್ರಮಿಕ ಹಾಗೂ ದೈವಿಕ ವಿಪತ್ತುಗಳಿಂದಾಗಿ ಮನುಷ್ಯ ಭಯಬೀತನಾಗಿದ್ದಾನೆ ತನ್ನ ಮಿತಿಯನ್ನು ಅರಿತು ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳೊಂದಿಗೆ ಬದುಕುಬೇಕು ಎಂದು ಕರೆ ನಿಡಿದರು.
ಮೈಸೂರಿನ ಶ್ರೀ ಬಸವಲಿಂಗ ಮೂರ್ತಿ ಶರಣರು ಮಾತನಾಡಿ, ಪ್ರತಿಯೊಬ್ಬರು ಕೂಡ ಅಲ್ಲಾಹನಿಂದ ಬಂದು ಅಲ್ಲಾಹನೆಡಗೆ ಮರುಳುತ್ತಾನೆ ನಮ್ಮ ಪಂಚಭೂತಗಳೆಲ್ಲವೂ ಅಲ್ಲಾಹನ ಒಡೆತನದಲ್ಲಿವೆ, ನಾವು ಭಾಷೆ, ಧರ್ಮ, ವರ್ಗ ಎಂಬ ಬೇಧವನ್ನು ಮರೆತು ಬದುಕಬೇಕು ಎಂದರು.
ಶ್ರೀಕ್ಷೇತ್ರ ಸುಭ್ರಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಮಾತನಾಡಿ, ಸಾಮಾಜಿಕ ಚಿಂತನೆಗಳೊಂದಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ದೇವ ಸಂದೇಶಗಳನ್ನು ಅರಿತು ಸಮಾಜಮುಖಿ, ಚಿಂತನೆ, ಸಮಾಜಪರ ಕೆಲಸ ಕಾರ್ಯಗಳಲ್ಲಿ ಜನರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಪ್ರಸ್ತವಾವಿಕವಾಗಿ ಮಾತನಾಡಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.