ಹಾಸನ:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅಕ್ಷರ ದಾಸೋಹ ವ್ಯವಸ್ಥೆಯ ಮೂಲಕ ಉತ್ತಮ ಊಟೋಪಚಾರ ಪೂರೈಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಎನ್.ವಿಜಯ್ಪ್ರಕಾಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಒದಗಿಸುವ ಸಲುವಾಗಿ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಮೂಲಕ ಅಡುಗೆ ಮಾಡಿಸಲು ಅನುದಾನ ನಿಡುಗಡೆ ಮಾಡುವ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಪ್ರತಿ ಮತಗಟ್ಟೆಗಳಿಗೂ 1000 ರೂಪಾಯಿ ಯಂತೆ ಒಟ್ಟು 18,44,000ರೂ ಗಳ ಅನುದಾನವನ್ನು ನಿಗಧಿ ಮಾಡಲಾಗಿದೆ. ಅದರಂತೆ ಶಿಕ್ಷಾಣಾಧಿಕಾರಿಗಳು ಊಟೋಪಚಾರ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಹಾಸನ ನಗರ ಹೊರತುಪಡಿಸಿ ಉಳಿದ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ ಗ್ರಾಮೀಣ ಪ್ರದೇಶ, ಹೊಳೆನರಸೀಪುರ, ಅರಕಲಗೂಡು ಹಾಗೂ ಸಕಲೇಶಪುರ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲ ಮತಗಟ್ಟೆಗಳಿಗೆ ಅನುದಾನ ನೀಡಿದ್ದು ಸ್ವಚ್ಚತೆ, ಕುಡಿಯುವ ನೀರಿನ ಪೂರೈಕೆ, ಶೌಚಾಲಯಗಳಿಗೆ ನೀರು ಸರಬರಾಜು ಬಗ್ಗೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಮತಗಟ್ಟೆಗಳಲ್ಲಿ ಗುಣಮಟ್ಟದ ಆಹಾರ, ಸ್ವಚ್ಚತೆ ಕಾಪಾಡಬೇಕಿದೆ. ಈ ಸಂಬಂಧ ಯಾವುದೇ ದೂರುಗಳು ಬರಬಾರದು ಎಂದರಲ್ಲದೆ ಇದೇ ವೇಳೆ ಕಸ ಹೊರುವ ವಾಹನಗಳಿಗೆ ಕೆಲ ಸ್ವೀಪ್ ಗೀತೆಗಳನ್ನು ಪ್ರಸಾರ ಮಾಡುವಂತೆ ನಗರಸಭೆಯ ಆಯುಕ್ತರಾದ ರೂಪಶೆಟ್ಟಿ ಅವರಿಗೆ ವಿಜಯ್ ಪ್ರಕಾಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಹೆಚ್.ಸಿ.ಪುಟ್ಟಸ್ವಾಮಿ ಮಾತನಾಡಿ ಮತಗಟ್ಟೆ ಕೇಂದ್ರವಾಗಿರುವ ಶಾಲಾ ಕಟ್ಟಡಗಳ ದುರಸ್ಥಿ, ಶೌಚಾಲಯ, ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕು. ಅಂಗನವಾಡಿ ಕೇಂದ್ರಗಳು ಮತಗಟ್ಟೆಯಾಗಿದ್ದು ಅಲ್ಲಿನ ಸಿಬ್ಬಂದಿಗಳಿಗೆ ಸಮೀಪದ ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಬೇಕಿದೆ ಎಂದರು.
ಸಭೆಯಲ್ಲಿ ನಗರಸಭೆಯ ಆಯುಕ್ತರಾದ ರೂಪಶೆಟ್ಟಿ, ಯೋಜನ ನಿರ್ದೇಶಕರಾದ ಲಕ್ಷ್ಮೀ ಪಿ., ಸಹಾಯಕ ಯೋಜನಾಧಿಕಾರಿ ಸುದರ್ಶನ್ ಹಾಗೂ ಅಕ್ಷರ ದಾಸೋಹದ ಎಲ್ಲಾ ಸಹಾಯಕ ನಿರ್ದೇಶಕರುಗಳು ಹಾಜರಿದ್ದರು.