ಕಾರವಾರ: ಮಾಸ್ಕ್ ಧರಿಸದವರಿಗೆ ಸರಕಾರಿ ಕಛೇರಿಗಳಿಗೆ ಪ್ರವೇಶವಿಲ್ಲ ಜಿಲ್ಲಾಧಿಕಾರಿ ಹರೀಶಕುಮಾರ. ಕೆ ಹೇಳಿದ್ದಾರೆ.
ಜನ ಸಾಮಾನ್ಯರ ಅನುಕೂಲಕ್ಕಾಗಿ ಸರಕಾರವು ಕೋವಿಡ್-19 ರ Unlock4.00 ಮಾರ್ಗಸೂಚಿಯನ್ನು ಹೊರಡಿಸಿದ್ದು ಅದರಲ್ಲಿ ಅನೇಕ ಅನೇಕ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಲಾಗಿದೆ. ಆದರೆ ಬಹುತೇಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವುದು ಜಿಲ್ಲೆಯಲ್ಲಿ ಸಾಮಾನ್ಯ ಎಂಬಂತಾಗಿದೆ.
ಉತ್ತರ ಕನ್ನಡ ಜಿಲ್ಲೆ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ರಾಜ್ಯಕ್ಕೇ ಮಾದರಿಯಾಗಿದ್ದು , ಈ ಹಂತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆಯೆಂದು ನಾವು ಮೈಮರೆಯುವ ಹಾಗಿಲ್ಲ. ಕೊವಿಡ್-19 ಇದು ಬಹುಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವದರಿಂದ ಇದರ ನಿಯಂತ್ರಣ ಸಾರ್ವಜನಿಕರ ಸಹಕಾರವಿಲ್ಲದೇ ಸಾಧ್ಯವಾಗುವದಿಲ್ಲ. ಅಲ್ಲದೇ ಮಾರ್ಗಸೂಚಿಯ ಅನುಬಂಧ-1 ರಂತೆ ಮಾಸ್ಕ ಬಳಸದೇ ಇರುವದು , ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವದು ದಂಡನೀಯ ಅಪರಾಧವಾಗಿರುತ್ತದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು ಜಿಲ್ಲೆಯ ಸರ್ಕಾರಿ ಕಚೇರಿಗಗಳಿಗೆ ಮಾಸ್ಕ ಧರಿಸದೇ ಬರುವಂತಹ ಸಾರ್ವಜನಿಕರಿಗೆ ಕಚೇರಿಗೆ ಪ್ರವೇಶ ನೀಡುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ದಂಡ ನೀತಿ ಸಂಹಿತೆ 1860 ಮತ್ತು ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದೇ ಇರುವವರಿಗೆ ಸರಕಾರದ ಆದೇಶದಂತೆ ನಗರ ಪ್ರದೇಶದಲ್ಲಿ ರೂ.200/- ಹಾಗೂ ಇನ್ನುಳಿದ ಪ್ರದೇಶದಲ್ಲಿ ರೂ.100/- ದಂಡವನ್ನು ವಿಧಿಸಲು ಹಾಗೂ ಯಾವುದೇ ವ್ಯಾಪಾರದ ಸ್ಥಳದಲ್ಲಿ ಮಾಸ್ಕ ಧರಿಸದೇ ಇದ್ದಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅಲ್ಲದೇ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಕಟ್ಟಿಕೊಂಡು ಇರುವುದು ಕಂಡುಬಂದಲ್ಲಿ ಮೊದಲು ಎಚ್ಚರಿಕೆ ನೀಡಲಾಗುವುದು. ನಂತರ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಸಂಬಂಧಿಸಿದ ಸ್ಥಳಿಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.