ಭಟ್ಕಳ: ಪ್ರಯಾಣಿಕರ ಬಳಿಯಿಂದ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗೊಂದನ್ನು ಕಳುವುಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಭಟ್ಕಳ ರೈಲ್ವೆ ಪೊಲೀಸರು ಬಂಧಿಸಿರುವ ಶನಿವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಆಹ್ಮದ್ ಶೇಖ್ ಮತ್ತು ಶಹಿರಾ ಶೇಖ್ ಎಂದು ಗುರುತಿಸಲಾಗಿದೆ.
ಇವರು ಉಡುಪಿ ರೈಲು ನಿಲ್ದಾಣದಿಂದ ನಗದು ಮತ್ತು ಚಿನ್ನಾಭರಣವಿದ್ದ ಬ್ಯಾಗನ್ನು ಕಳುವು ಮಾಡಿದ್ದಾರೆ ಎಂದು ಉಡುಪಿಯ ಪ್ರಕಾಶ ಅಲ್ವಿನ್ ಮಂಡೋಸಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಿಸಿ ಟಿವಿ ಕ್ಯಾಮರಾದ ಜಾಡನ್ನು ಹಿಡಿದು ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು ಗೋವಾಕ್ಕೆ ಹೋಗುತ್ತಿದ್ದ ಮತ್ಸ್ಯಗಂಧ ರೈಲಿನಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದಾರೆಂಬ ಮಾಹಿತಿ ಮೆರೆಗೆ ಭಟ್ಕಳದ ಪೊಲೀಸರಿಗೆ ವಿಷಯ ಮುಟ್ಟಿದ್ದು ಇಲ್ಲಿನ ರೈಲ್ವೆ ಪೊಲೀಸರು ಕಾರ್ಯಪ್ರವೃತ್ತಗೊಂಡು ಆರೋಪಿಗಳನ್ನು 50ಸಾವಿರ ರೂ ನಗದು ಹಾಗೂ 1.20ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಬಂಧಿಸಿ ಮಣಿಪಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಕಾರ್ಯಚರಣೆಯಲ್ಲಿ ಉಡುಪಿ ರೈಲ್ವೆ ಪೊಲೀಸರಾದ ಸಂತೋಷ ಗಾಂವಕರ್, ಭಟ್ಕಳದ ಶಿಶುಪಾಲ ಮತ್ತು ಅಜೇಶ ಪಾಲ್ಗೊಂಡಿದ್ದರು. ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಚರಣೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.