ಭಟ್ಕಳ: ಜಾಲಿ ಪಂ.ಪ ವ್ಯಾಪ್ತಿಯ ವಾ.ನಂ.19ರ ತಗ್ಗರಗೋಡ ಗ್ರಾಮದ ಸ.ನಂ-7 ರ ಕ್ಷೇತ್ರ 0-10-0 ಜಮೀನಿನಲ್ಲಿ ಯೋಜಿತ ಭಟ್ಕಳ ಒಳಚರಂಡಿ ಯೋಜನೆ ವೆಟ್ವೇಲ್ ನಿರ್ಮಾಣವನ್ನು ಕೈಬಿಡುವಂತೆ ಆಗ್ರಹಿಸಿ ಆ ಭಾಗದ ಗ್ರಾಮಸ್ಥರು ರವಿವಾರದಂದು ತಹಸಿಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿಯನ್ನು ಅರ್ಪಿಸಿದರು.
ಸದ್ರಿ ಪ್ರದೇಶದಲ್ಲಿ 100ಕ್ಕೂ ಹೆಚ್ಚು ವಾಸ್ತವ್ಯದ ಮನೆಗಳಿದ್ದು ಸುಮಾರು 2000ಕ್ಕೂ ಅಧಿಕ ಜನರು ವಾಸಮಾಡುತ್ತಿದ್ದಾರೆ. ಒಂದು ವೇಳೆ ಇಲ್ಲಿ ಉದ್ದೇಶಿತ ಯೋಜನೆಯನ್ನು ಕೈಗೊಂಡಿದ್ದಲ್ಲಿ ಈ ಭಾಗದ ಜನರು ಕುಡಿಯುವ ನೀರು ಸೇರಿದಂತೆ ನೈರ್ಮಲ್ಯ, ಪರಿಸರ ಹಾಗೂ ಆರೋಗ್ಯದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ ಯೋಜನೆಯ ಉದ್ದೇಶಿತ ಸ್ಥಳದ 50ಮೀಟರ್ ಅಂತರದಲ್ಲಿ ಪ್ರಾಥಮಿಕ ಶಾಲೆ, ಮಸೀದಿ, ಆರಾಧನಾ ಸ್ಥಳಗಳಿದ್ದು ಈ ಯೋಜನೆಯಿಂದಾಗಿ ಗ್ರಾಮಸ್ಥರು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆಯೂ ಸ್ಥಳ ಪರಿಶೀಲನೆಗಾಗಿ ಬಂದ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದು ಅದರ ಪರಿಣಾಮವಾಗಿ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಇತ್ತಿಚೆಗೆ ಸದ್ರಿ ಉದ್ದೇಶಿತ ಒಳಚರಂಡಿ ವೆಲ್ವೇಲ್ ಕಾಮಗಾರಿ ಆರಂಭಿಸಲು ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಅಭಿಯಂತರರು ಹಾಗು ಗುತ್ತಿಗೆದಾರರು ಸದ್ರಿ ಸ್ಥಳಕ್ಕೆ ಬಂದು ಜೆಸಿಬಿ ಎಂತ್ರದ ಮೂಲಕ ಯಾವುದೇ ಪೂರ್ವ ಮಾಹಿತಿ ನೀಡದೆ, ಜಾಲಿ ಪಟ್ಟಣ ಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೇ ಕಾಮಗಾರಿ ಆರಂಭಿಸಲು ಬಂದಿದ್ದು ಗ್ರಾಮಸ್ಥರ ಆಗ್ರಹದ ಮೇರೆಗೆ ಕಾಮಗಾರಿ ಸ್ಥಗಿತಗೊಳಿಸಿ ಹೋಗಿದ್ದು ಇರುತ್ತದೆ. ಕಾರಣ ಈ ಭಾಗದಲ್ಲಿ ಕಾಮಗಾರಿ ಕೈಗೊಂಡರೆ ಸಾರ್ವಜನಿಕರು ಹಲವು ತೊಂದರೆಗಳನ್ನು ಅನುಭವಿಸಬೇಕಾಗಿ ಬರುತ್ತಿದ್ದು ಉದ್ದೇಶಿತ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಈ ಭಾಗದ ಜನರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಾಲಿ ಪಂ.ಪ. ಮಾಜಿ ಅಧ್ಯಕ್ಷ ಅಬ್ದುಲ್ ರಹೀಮ್, ಗ್ರಾಮಸ್ಥರಾದ ಫಾತಿಮಾ ಬತುಲ್, ಝಹೀರ್, ರುಖಿಯಾ, ಮರಿಯಂ, ಯಾಸಿರ್, ಕಾಸಿಮ್ ಅಲಿ, ಮತ್ತಿತರರು ಉಪಸ್ಥಿತರಿದ್ದರು.