ಭಟ್ಕಳ : ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ಸಿಲುಕಿದ ಭಟ್ಕಳ ಮೂಲದ ಮೀನುಗಾರರು ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ಸಪ್ಟೆಂಬರ್ 9 ರಂದು ಹೊನ್ನಾವರ ಬಂದರಿನಿಂದ ನೌಶಾದ್ ಖಾನ್ ಎಂಬುವವರಗೆ ಸೇರಿದ ಕಮ್ರುಲ್ಲಾ ಬಾಹರ್ ಹೆಸರಿನ ಬೋಟ್ ಮೀನುಗಾರಿಕೆಗೆ ಹೋಗಿತ್ತು. ನಿನ್ನೆ ಆಳ ಸಮುದ್ರದಲ್ಲಿ ಬೋಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.
ಬೋಟಿನಲ್ಲಿ ಭಟ್ಕಳದ ಒಟ್ಟು 24 ಮೀನುಗಾರರಿದ್ದರು.
ಹವಮಾನ ವೈಪರೀತ್ಯದಿಂದ ತೀರಕ್ಕೆ ಬರುವುದು ಕಷ್ಟವಾಗಿತ್ತು. ಹೀಗಾಗಿ ಭಟ್ಕಳದ ತಂಜೀಮ್ ಪದಾಧಿಕಾರಿಗಳು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚುವ ಶಿವರಾಮ ಹೆಬ್ಬಾರ್ ಸೇರಿದಂತೆ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಮಧ್ಯೆ ಮೀನುಗಾರಿಕಾ ಉಪನಿರ್ದೇಶಕ ನಾಗರಾಜು ಅವರು ಕೂಡ ಕೋಸ್ಟ್ ಗಾರ್ಡ್ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನೌಕೆಯೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ನಿನ್ನೆ ಸಂಜೆ ವೇಳೆ ರಕ್ಷಣೆ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಕೋಸ್ಟ್ ಗಾರ್ಡ್ ಸಿಬ್ಬಂದೊಗಳು ಎಲ್ಲಾ 24 ಜನರನ್ನ ರಕ್ಷಣೆ ಮಾಡಿದ್ದಾರೆ.
ರಕ್ಷಣೆಗೊಳಗಾದ ಎಲ್ಲ ಮೀನುಗಾರರು ಕಾರವಾರ ಬಂದರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ತಂಜೀಮ್ ಉಪಾಧ್ಯಕ್ಷ ಅತಿಕುರಹಮನ್ ಮುನಿರೀ , ತಂಜೀಮ್ ಸಂಸ್ಥೆಯ ಇನಾಯತ್ ಉಲ್ಲಾ ಶಾಬಾಂದ್ರಿ, ಪುರಸಭೆ ಮಾಜಿ ಅಧ್ಯಕ್ಷ ಸಾಧಿಕ್ ಮಟ್ಟಾ ಇನ್ನಿತರರು ಕಾರವಾರ ಬಂದರಿನಲ್ಲಿ ಹಾಜರಿದ್ದರು.
ಎಲ್ಲಾ ಮೀನುಗಾರರು ಭಟ್ಕಳದಲ್ಲಿರುವ ತಮ್ಮತಮ್ಮ ಮನೆಗೆ ತಲುಪಿದ್ದಾರೆ.ಅಪಾಯಕ್ಕೆ ಸಿಲುಕಿದ ಮೀನುಗಾರರನ್ನ ರಕ್ಷಿಸಲು ಸಹಕರಿಸಿದ ಜಿಲ್ಲಾಡಳಿತ, ಸರ್ಕಾರಕ್ಕೆ ಭಟ್ಕಳದ ತಂಜೀಮ್ ಸಂಸ್ಥೆ ಧನ್ಯವಾದ ಸಲ್ಲಿಸಿದ್ದಾರೆ.