ಶ್ರೀನಿವಾಸಪುರ: ಬೈರಗಾನಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು.
ತಾಲ್ಲೂಕಿನ ಆಂದ್ರ ಗಡಿಭಾಗದ ಬೈರಗಾನಪಲ್ಲಿ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರಾದ ಅನಿತಾ ರಾಜೇಂದ್ರ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅಭಿವೃದ್ದಿ ಇಲಾಖೆಗಳು 2019-20ನೇ ಸಾಲಿನ ಸೆಪ್ಟೆಂಬರ್ ಅಂತ್ಯದವರೆಗೆ ಸಾಧಿಸಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿದ್ದು ಸಭೆಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಬಾರದೆ ಕಡೆಗಣಿಸಿದ್ದಾರೆ ಎಂದು ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಸದಸ್ಯ ಸಂಜಯ್ ರೆಡ್ಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿ ಎಂದು ಪಿ.ಡಿ.ಒ.ಗಳಿಗೆ ತಿಳಿಸಿದರು.
ಸಭೆಯಲ್ಲಿ ಸಂಜಯರೆಡ್ಡಿ ಮಾತನಾಡಿ ಈ ಗ್ರಾಮಪಂಚಾಯಿತಿಯಲ್ಲಿ 11 ಹಳ್ಳಿಗಳು ಸೇರಿದ್ದು, ಸರ್ಕಾರಿ ಕೊಳವೆ ಬಾವಿಗಳು ಕುಡಿಯುವ ನೀರಿಗಾಗಿ 28 ಕೊರೆಯಲಾಗಿದ್ದು, ಇವುಗಳಲ್ಲಿ 11 ಕೊಳವೆ ಬಾವಿಗಳು ಕೆಲಸ ಮಾಡುತ್ತಿವೆ, ಆದರೆ ಇವುಗಳ ಮಾಸಿಕ ವಿಧ್ಯುತ್ ಬಿಲ್ಲು ಸುಮಾರು 2 ಕೋಟಿ ರೂಗಳು ಬಾಕಿ ಇದೆ ಎಂದು ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸಿದ್ದಾರೆ, ಕೊಳವೆ ಬಾವಿಗಳಿಗೆ ಮೀಟರುಗಳನ್ನು ಯಾವೊಂದಕ್ಕೂ ಅಳವಡಿಸಿರುವುದಿಲ್ಲ, ಇದರಲ್ಲಿ 1.68ಕೋಟಿ ರೂಗಳನ್ನು ನಾವುಗಳು ಪಾವತಿ ಮಾಡಬೇಕಾಗಿದೆ. 31 ಲಕ್ಷ ಬಡ್ಡಿ ವಿಧಿಸಿದ್ದಾರೆ ಎಂದು ಬೆಸ್ಕಾಂ ಇಲಾಖೆ ಮೇಲೆ ಆರೋಪ ಮಾಡಿದ್ದಾರೆ. 17 ಕೊಳವೆ ಬಾವಿಗಳು ಕೆಲಸ ಮಾಡದೆ ಇದ್ದರೂ ಇವುಗಳಿಗೂ ಸಹ ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸುತ್ತಲೆ ಇದ್ದಾರೆ,ಇದಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪ ಮಾಡಿದರು.
ಪಿ.ಡಿ.ಒ.ರಾಮಚಂದ್ರಪ್ಪ ಮಾತನಾಡಿ ಗ್ರಾ.ಪಂ. ವಾಪ್ತಿಯಲ್ಲಿ 524 ಮನೆಗಳು ವಿವಿಧ ವಸತಿ ಯೋಜನೆಯಡಿ ಮಂಜೂರಾಗಿದ್ದು, 412 ಮನೆಗಳು ಪೂರ್ಣವಾಗಿದ್ದು, 26 ಮನೆಗಳು ಬ್ಲಾಕ್ ಆಗಿದ್ದು, ಇನ್ನು ಉಳಿದ 10 ಮನೆಗಳನ್ನು ಪ್ರಾರಂಭ ಮಾಡಿರುವುದಿಲ್ಲ. ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಡಿ 1 ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ, ಹೊಸ ಉಡ್ಯ ಮತ್ತು ಗಂಟನ್ನಗಾರಿಪಲ್ಲಿಯಲ್ಲಿ 2 ಮನೆಗಳು ಪೂರ್ಣವಾಗಿದ್ದು ಇವರಿಗೆ 1 ಬಿಲ್ಲು ಸಹ ಬಂದಿರುವುದಿಲ್ಲ. ನರೇಗ ಯೋಜನೆಯಡಿ ಚೆಕ್ ಡ್ಯಾಂ ಪೂರ್ಣವಾಗಿದ್ದು, ಇನ್ನೊಂದು ಪ್ರಗತಿಯಲ್ಲಿರುತ್ತದೆ, ಸಮುದಾಯ ಭವನಗಳಿಗೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತರು ಮನವಿ ಮಾಡಿ ಈ ಪಂಚಾಯಿತಿಯಲ್ಲಿ 9 ಕೇಂದ್ರಗಳು ನಡೆಯುತ್ತಿದ್ದು, ಎಲ್ಲಾ ಕೇಂದ್ರಗಳು ಶಿಥಿಲವಾಗಿದ್ದು, ಮಳೆ ಬಂದರೆ ಸೋರುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಇದೆ ಸಮಯದಲ್ಲಿ ಪಂಚಾಯಿತಿಯ ಜಲಗಾರರಿಗೆ ಆಡಳಿತ ಅಧ್ಯಕ್ಷರು, ಉಪಾಧ್ಯಕ್ಷರು ಪಿ.ಡಿ.ಒ. ವತಿಯಿಂದ ಜಲಗಾರರಿಗೆ ಸಮ ವಸ್ತ್ರವನ್ನು ವಿತರಿಸಿದರು.
ಇದೆ ಸಂದರ್ಭದಲ್ಲಿ ಅಧ್ಯಕ್ಷಿಣಿ ಅನಿತ, ಉಪಾಧ್ಯಕ್ಷರಾದ ಎನ್. ಶ್ರೀನಿವಾಸರೆಡ್ಡಿ, ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಸ್ಕಾಂ ಕಿರಿಯ ಇಂಜಿನಿಯರ್ ಆನಂದ್, ಸ್ರೀ ಶಕ್ತಿ ಸಂಘದ ಸದಸ್ಯರು ಹಾಜರಿದ್ದರು.