ಹೊಸದಿಲ್ಲಿ: ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ತನ್ನೆದುರು ಸಲ್ಲಿಸಲಾಗಿರುವ ಮೂರು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಈ ಪೈಕಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾಗಿದ್ದರೆ ಇನ್ನೊಂದು ಅರ್ಜಿಯನ್ನು 31 ವಾಯುಪಡೆ ಉದ್ಯೋಗಾ ಕಾಂಕಿಗಳ ಗುಂಪೊಂದು ಸಲ್ಲಿಸಿದೆ. ಈಗಾಗಲೇ ಸಶಸ್ತ್ರ ಪಡೆಗಳಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರಿಗೆ ಅಗ್ನಿಪಥ್ ಯೋಜನೆಯನ್ನು ಅನ್ವಯಿಸಬಾರದು ಎಂದು ಈ ಗುಂಪು ತನ್ನ ಅರ್ಜಿಯಲ್ಲಿ ಆಗ್ರಹಿಸಿದೆ.
ದಿಲ್ಲಿ, ಕೇರಳ, ಪಂಜಾಬ್ ಮತ್ತು ಹರ್ಯಾಣ, ಪಾಟ್ನಾ ಹಾಗೂ ಉತ್ತರಾಖಂಡ ಉಚ್ಚ ನ್ಯಾಯಾಲಯಗಳಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಸ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯವು ಈ ಅರ್ಜಿಗಳನ್ನು ಇತರ ಅರ್ಜಿಗಳೊಂದಿಗೆ ಪಟ್ಟಿ ಮಾಡಿದ್ದು, ಬುಧವಾರ ವಿಚಾರಣೆ ನಡೆಸಲಿದೆ.