ಭಟ್ಕಳ: ಇಲ್ಲಿನ ಪ್ರಸಿದ್ಧ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನಕ್ಕೆ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ, ಸರಕಾರದ ಪ್ರತಿನಿಧಿ ದೇವದತ್ತ ಕಾಮತ್ ಅವರು ತಮ್ಮ ತಂದೆ ಎಸ್.ಪಿ.ಕಾಮತ್ ಹಾಗೂ ಕುಟುಂಬದವರೊಂದಿಗೆ ಭೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದರು.
ದೇವದತ್ತ ಕಾಮತ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ನಮ್ಮ ದೇವಸ್ಥಾನಗಳು, ಪ್ರಾರ್ಥನಾ ಗ್ರಹಗಳು ಕೇವಲ ಪ್ರಾರ್ಥನೆಯ ಸ್ಥಳ ಮಾತ್ರವಲ್ಲ. ಅವುಗಳು ಸಾಕ್ಷಾತ್ ಹಿಂದೂ ಧರ್ಮದ ಪ್ರತಿಫಲನ ಕೇಂದ್ರಗಳಾಗಿವೆ. ನಮ್ಮ ಹಿಂದೂ ಧರ್ಮದ ನಂಬಿಕೆಯ ಕೇಂದ್ರಗಳಾಗಿವೆ. ಋಷಿ ಮುನಿಗಳು ಮಾಡಿದ ತಪಸ್ಸು, ಅವರ ಆಶೀರ್ವಾದವು ಹಿಂದೂ ಧರ್ಮದ ಮೇಲಿದೆ. ಕೇವಲ ಘೋಷಣೆಗಳನ್ನು ಕೂಗುವುದರಿಂದ ನಾವು ಧರ್ಮ ರಕ್ಷಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ನಮ್ಮ ದೇವಸ್ಥಾನದಲ್ಲಿನ ಪರಂಪರೆಯು ನಮ್ಮ ಜೀವನಕ್ಕೆ ಸ್ಫೂರ್ತಿದಾಯಕವಾಗಿದೆ ಎಂದರು.
ಕಾರವಾರದ ಹಿರಿಯ ನ್ಯಾಯವಾದಿ, ಶಿಕ್ಷಣ ತಜ್ಞ ಎಸ್. ಪಿ. ಕಾಮತ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಒಂದು ಉತ್ತಮ ವಿಶಿಷ್ಟ ಪರಂಪರೆಯ ಜಿಲ್ಲೆಯಾಗಿದೆ. ಭಟ್ಕಳದಿಂದ ಕಾರವಾರ, ಸಿದ್ದಾಪುರದಿಂದ ಸುಫಾ ತನಕ ನಮ್ಮ ಜಿಲ್ಲೆ ಒಂದು ವಿಶಿಷ್ಟ ಜಿಲ್ಲೆಯಾಗಿದೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ತರಹದ ಪರಸ್ಪರ ಸಹಕಾರ, ದಾನ ಧರ್ಮ ಬೇರೆ ಜಿಲ್ಲೆಗಳಿಗಿಂತ ಭಿನ್ನವಾಗಿದೆ ಎಂದರು. ಆದರೆ ನಮ್ಮ ಜಿಲ್ಲೆಗೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಾವು ವಿಫಲರಾಗಿದ್ದೇವೆ. ಜಿಲ್ಲೆಯಲ್ಲಿ ಎನಾದರೊಂದು ಬದಲಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ರಾಜ್ಯಕ್ಕೆ ಶೇ.80ರಷ್ಟು ವಿದ್ಯತ್ ನಮ್ಮ ಜಿಲ್ಲೆಯಿಂದ ಕೊಡುತ್ತಿದ್ದೇವೆ. ಹೈದರಾಬಾದ್ ಕರ್ನಾಟಕ್ಕೆ ವಿಶೇಷ ಸ್ಥಾನ ಕೊಟ್ಟರು, ಆದರೆ ನಮ್ಮ ಜಿಲ್ಲೆಗೆ ವಿಶೇಷ ಸ್ಥಾನ ಕೊಡಬೇಕು ಎನ್ನುವ ಕುರಿತು ಯಾರೂ ಪ್ರಯತ್ನವನ್ನೇ ಮಾಡಿಲ್ಲ ಎಂದರು. ಜಿಲ್ಲೆಯಲ್ಲಿ ವಿದ್ಯುತ್ ಪ್ರಾಜೆಕ್ಟ್ಗಳು, ಸೀಬರ್ಡ, ನೌಕಾನೆಲೆ, ಕೈಗಾ, ರೈಲ್ವೇಗಳಿಗೆ ನಾವು ಆಸ್ಪದ ಕೊಟ್ಟಿದ್ದೇವೆ. ಆದರೆ ಇನ್ನೂ ತನಕ ನಾವು ನಮ್ಮ ಜಿಲ್ಲೆಗೆ ವಿಶೇಷ ಸ್ಥಾನವನ್ನು ಕೇಳಲ ಮರೆತಿದ್ದೇವೆ ಎಂದೂ ಕಾಮತ್ ಹೇಳಿದರು. ನಮ್ಮ ಜಿಲ್ಲೆಯ ಯಾವುದೇ ಮಕ್ಕಳು ಶೈಕ್ಷಣಿಕವಾಗಿ, ಆರೋಗ್ಯದಿಂದ ವಂಚಿತವಾಗಬಾರದು, ಅವರಿಗೆ ಸಹಾಯ ನೀಡುವ ಸಹಕಾರ ಜನತೆಗೆ ದೊರೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರ ಪಟ್ಟವನ್ನು ಗಿಟ್ಟಿಸಿಕೊಂಡ ದೇವದತ್ತ ಕಾಮತ್ ಅವರ ಸಾಧನೆ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಮುಂದೆ ಅವರಿಗೆ ಉಜ್ವಲ ಭವಿಷ್ಯ ಕೂಡಿ ಬರಲಿ ಎಂದರು.
ಮಾನವರಲ್ಲಿ ಎಷ್ಟೇ ಹಣವಿದ್ದರೂ ಸಹ ಮಾನವ ಸಂತಸದಿಂದ ಇರಲು ಸಾಧ್ಯವಿಲ್ಲ. ನಮ್ಮ ದೇಹವನ್ನು ವ್ಯಾಧಿ ಹೊಕ್ಕುವಾಗ ಅವನಲ್ಲಿ ಹಣವಿದೆಯೇ ಎಂದು ನೋಡುವುದಿಲ್ಲ. ಆದರೆ ನಾವು ಮಾಡುವ ದಾನ ಧರ್ಮದಿಂದ ವ್ಯಾಧಿ ದೂರವಾಗಲು ಸಾಧ್ಯ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಮುರಳೀಧರ ಪ್ರಭು, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ ಎಂ.ವಿ.ಗವಾಳಿ, ಡಿ.ಜೆ.ಕಾಮತ್ ಮಾತನಾಡಿದರು. ಸಮಾಜದ ಮುಖ್ಯಸ್ಥರಾದ ಸುಬ್ರಾಯ ಕಾಮತ್ ಉಪಸ್ಥಿತರಿದ್ದರು. ಕಿರಣ್ ಶ್ಯಾನಭಾಗ್ ಸ್ವಾಗತಿಸಿ, ವಂದಿಸಿದರು.