ಹೊಸದಿಲ್ಲಿ : ಪ್ರತಿಭಟನಾಕಾರರು ರಸ್ತೆ ಸಂಚಾರಕ್ಕೆ ತಡೆಯೊಡ್ಡುವುದನ್ನು ಸಹಿಸುವುದಿಲ್ಲ. ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಇನ್ನೂ ಕೂಡಾ ಮುಂದುವರಿಸುತ್ತೀರಾ ಎಂದು ಸುಪ್ರೀಂಕೋರ್ಟ್ ಪ್ರತಿಭಟನಾನಿರತ ರೈತ ನಾಯಕರನ್ನು ಮಂಗಳವಾರ ಪ್ರಶ್ನಿಸಿದೆ.
ಮುಕ್ತವಾಗಿರುವ ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡುವ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸಿದೆ. ರಸ್ತೆಯಲ್ಲಿ ತಿರುಗಾಡುವ ನಿವಾಸಿಗಳ ಹಕ್ಕುಗಳಿಗೆ ರೈತನಾಯಕರು ಹಸ್ತಕ್ಷೇಪ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಾಮರ್ಶಿಸುವಂತೆ ತಿಳಿಸಿದೆ.
ನೊಯ್ದಾದಿಂದ ದಿಲ್ಲಿಗೆ ಪ್ರಯಾಣದ ಅವಧಿ 20 ನಿಮಿಷಗಳಾಗಿದ್ದು, ರೈತ ಪ್ರತಿಭಟನೆಯ ಕಾರಣದಿಂದಾಗಿ ತನಗೆ ದಿಲ್ಲಿ ತಲುಪಲು ಎರಡು ತಾಸುಗಳೇ ಬೇಕಾಯಿತು ಎಂದು ದೂರಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ರೈತ ನಾಯಕರನ್ನು ಪ್ರಶ್ನಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಿಲ್ಲಿಯ ಶಾಹೀನ್ಭಾಗ್ನಲ್ಲಿ ನಡೆದ ಪ್ರತಿಭಟನೆ ಸೇರಿದಂತೆ ಹಲವಾರು ರಸ್ತೆ ತಡೆಗೆ ಸಂಬಂಧಿಸಿ ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶಗಳನ್ನು ಪಾಲಿಸಲಾಗುತ್ತಿಲ್ಲವೆಂದು ಅರ್ಜಿದಾರೆ ಮೋನಿಕಾ ಅಗರ್ವಾಲ್, ಅರ್ಜಿಯಲ್ಲಿ ತಿಳಿಸಿದ್ದರು.