ಭಟ್ಕಳ: ನಗರದ ಸಾಗರ ರಸ್ತೆಯಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಸುಪ್ರೀಮ್ ಕೋರ್ಟ್ನಿಂದ ನಿಯೋಜಿತ ಪರಿಸರ ರಕ್ಷಣಾ ನೀತಿ ಸಮಿತಿ ಸದಸ್ಯೆ ನ್ಯಾಯವಾದಿ ಆಲಮಿತ್ರ ಪಾಟೀಲ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದು ಘನ ತ್ಯಾಜ್ಯ ವಿಲೇವಾರಿ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದರು.
ನಂತರ ಇಲ್ಲಿನ ಉಸ್ಮಾನಿಯ ಕಾಲೋನಿಯಲ್ಲಿರುವ ‘ಕಪಡಾ ಬ್ಯಾಂಕ್’ ಗೆ ಭೇಟಿ ನೀಡಿದ ಅವರು ಭಟ್ಕಳದ ಜನರು ಉಪಯೋಗಿಸದೆ ಇರದ ಬಟ್ಟೆಗಳನ್ನು ಕಪಡಾ ಬ್ಯಾಂಕ್ ನಲ್ಲಿ ದೇಣಿಗೆ ನೀಡುವುದರ ಮೂಲಕ ಸಮಾಜಕ್ಕೆ ಹಾಗೂ ಪರಿಸರಕ್ಕೆ ಅಗಾಧ ಪ್ರಮಾಣದಲ್ಲಿ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಪ್ರಂಶಸಿದರು. ಹಳೆಯ ಬಟ್ಟೆಗಳನ್ನು ಬಡವರಿಗೆ ನೀಡುವುದರ ಮೂಲಕ ಈ ಸಂಸ್ಥೆ ಸಮಾಜ ಸೇವೆಯನ್ನು ಮಾಡುತ್ತಿದ್ದು ಇದರಿಂದಾಗಿ ಹಳೆ ಬಟ್ಟೆಗಳು ತ್ಯಾಜ್ಯಕ್ಕೆ ಸೇರದೆ ಪರಿಸರವನ್ನು ಸ್ವಚ್ಚ ಹಾಗೂ ಸುಂದರವಾಗಿಡುವಲ್ಲಿ ಸಹಕಾರಿಯಾಗುತ್ತದೆ ಎಂದ ಅವರು ಇದನ್ನು ಇತರ ನಗರಗಳಲ್ಲಿಯೂ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ದೇಶದಾದ್ಯಂತ ಸಮರ್ಪಕ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. 1996ರಲ್ಲಿ ಸುಪ್ರಿಮ್ ಕೋರ್ಟ್ ಕದ ತಟ್ಟುವುದರ ಮೂಲಕ ಪರಿಸರ ಸಂರಕ್ಷಣೆಗಾಗಿ ಕ್ರಮ ಜರಗಿಸುವಂತೆ ಆಗ್ರಹಿಸಿದ್ದೇನೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಪುರಸಭಾ ಮುಖ್ಯಾಧಿಕಾರಿ ದೇವರಾಜ, ಜಾಲಿ ಪ.ಪಂ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಉಪಸ್ಥಿತರಿದ್ದರು.