ಭಟ್ಕಳ:ಜಿಲ್ಲೆಯಾದ್ಯಂತ ಈ ಬಾರಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಮುಂಗಾರು ಮಳೆ ನಿಗದಿತ ಸಮಯದಲ್ಲಿ ಜಿಲ್ಲೆಯನ್ನು ಪ್ರವೇಶಿಸದಿದ್ದರೆ. ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಈ ನಡುವೆ ಶಾಸಕ ಸುನೀಲ ನಾಯ್ಕ ಅವರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.ಭಟ್ಕಳ ತಾಲ್ಲೂಕಿಗೆ ನೀರುಣಿಸುತ್ತಿದ್ದ ಕಡವಿನಕಟ್ಟೆ ನದಿಯಲ್ಲಿ ಹೂಳು ತುಂಬಿ ಈ ಬಾರಿ ನೀರಿಗೆ ತತ್ವಾರ ಉಂಟಾಗಿದೆ. ಸರ್ಕಾರಿ ಲೆಕ್ಕಾಚಾರದಂತೆ, ಭಟ್ಕಳದಲ್ಲಿರುವ ಒಟ್ಟು 52 ಕೆರೆಗಳ ಪರಿಸ್ಥಿತಿಯೂ ಇದೇ ಆಗಿದೆ. ನೀರಿಲ್ಲದೇ ಹಲವೆಡೆ ಮರ, ಸಸಿಗಳು ಒಣಗಿ ಹೋಗಿವೆ. ನೀರಿನ ಮೂಲಗಳೆಲ್ಲವೂ ಬತ್ತಿ ಹೋಗಿರುವುದರಿಂದ ದೊಡ್ಡ ದೊಡ್ಡ ಬಾವಿ, ಕೆರೆಗಳನ್ನು ಹೊಂದಿರುವ ಕೃಷಿಕರೂ ದಿನಬಳಕೆಗೆ ಟ್ಯಾಂಕರ್ ನೀರನ್ನು ಅವಲಂಬಿಸುವ ಸ್ಥಿತಿ ಇದೆ. ಕೆಲವೆಡೆ ದುಡ್ಡು ಕೊಟ್ಟರೂ ಟ್ಯಾಂಕರ್ ನೀರು ಸಿಗದ ಪರಿಸ್ಥಿತಿಯೂ ಇದೆ.
ಇದನ್ನೆಲ್ಲ ಗಮನಿಸಿದ ಸುನೀಲ ನಾಯ್ಕ, ಭಾನುವಾರ ಭಟ್ಕಳದ ಚನ್ನಪಟ್ಟಣ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಕುಡಿಯುವ ನೀರಿನ ಅಭಾವ ತಲೆದೂರಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ಮಳೆ ಬಂದಿಲ್ಲ. ಜನರಿಗೆ ಟ್ಯಾಂಕರ್ ನೀರು ಪೂರೈಸಲು ಕೂಡ ಎಲ್ಲಿಂದ ನೀರು ತರಬೇಕು ಎನ್ನುವುದು ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.
ಇದನ್ನೆಲ್ಲ ಮನಗಂಡು, ಬಿಜೆಪಿ ಹಾಗೂ ಸಾರ್ವಜನಿಕರ ಪರವಾಗಿ ದೇವರಿಗೆ ವಿಶೇಷ ಸೇವೆ ನೀಡಿದ್ದೇವೆ. ಎರಡು– ಮೂರು ದಿನಗಳಲ್ಲೇ ಜಿಲ್ಲೆಯಲ್ಲಿ ಮಳೆಯಾಗಲಿ. ಬತ್ತಿರುವ ಜಲ ಮೂಲಗಳು ಜೀವ ಪಡೆದುಕೊಳ್ಳಲಿ ಎಂದು ಬೇಡಿಕೊಂಡಿದ್ದೇವೆ’ ಎಂದು ತಿಳಿಸಿದರು.ಈಗಾಗಲೇ ಕಡವಿನಕಟ್ಟೆ ಜಲಾಶಯದಲ್ಲಿ ಹೂಳೆತ್ತಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಟ್ಕಳದ ಎಲ್ಲ ಸಣ್ಣ, ದೊಡ್ಡ ನೀರಿನ ಮೂಲಗಳ ಹೂಳೆತ್ತುವ ಕಾರ್ಯಮಾಡಲಾಗುವುದು’ ಎಂದೂ ಅವರು ಈ ವೇಳೆ ತಿಳಿಸಿದರು.