ಭಟ್ಕಳ: ವಿದ್ಯಾರ್ಥಿ ಜೀವನದಲ್ಲಿ ಕಾನೂನಿನ ಅರಿವು ಮೂಡಿಸುವಂತಹ ಕೆಲಸಗಳು ಕಾರ್ಯಗತವಾಗಬೇಕು. ಎಂದು ಭಟ್ಕಳ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿ ಕೃಷ್ಣರಾಜ. ಕೆ ಹೇಳಿದರು.
ಅವರು ಮುರ್ಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಧಿಯೋಜನೆ ಇಲಾಖೆ, ಶಿಕ್ಷಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಮತ್ತು ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
'ಬಾಲ ಕಾರ್ಮಿಕರು, ಬಾಲ್ಯವಿವಾಹ, ಫೋಕ್ಷೊ ಕಾಯಿದೆ, ಮಕ್ಕಳ ಹಕ್ಕು, ಲೈಂಗಿಕ ಕಿರುಕುಳ, ಬಾಲಾಪರಾದ, ಮಹಿಳಾ ಹಕ್ಕು, ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಇರಬೇಕು. ಈ ನಿಟ್ಟಿನಲ್ಲಿ ಕಾನೂನುಗಳ ಅರಿತು ಅದರಂತೆ ನಡೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ವಕೀಲರ ಸಂಘದ ಅಧ್ಯಕ್ಷ ಆರ್. ಆರ್ ಶ್ರೇಷ್ಠಿ ಮಾತನಾಡಿ 'ಆಧುನಿಕತೆಗೆ ಹೊಂದಿಕೊಂಡಂತೆ ಕಾನೂನಿನಲ್ಲಿ ಕೂಡ ಬದಲಾವಣೆ ಆಗುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಾನೂನಿನ ಬಗ್ಗೆ ತಿಳಿದುಕೊಂಡು ಅದರ ಅನುಸಾರವಾಗಿ ಜೀವನ ನಡೆಸಬೇಕು. ವಿದ್ಯಾರ್ಥಿಗಳು ಸುಸಂಸ್ಕøತ ಸಮಾಜದ ನಿರ್ಮಾಣಕ್ಕೆ ಹಾಗೂ ದೇಶದ ಸಂವಿಧಾನದ ಬಗ್ಗೆ ಅದ್ಯಯನ ಮಾಡುವುದರ ಮುಖಾಂತರ ಜೀವನದಲ್ಲಿ ಸನ್ಮಾರ್ಗದಿಂದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲ ಎಸ್. ಕೆ. ನಾಯ್ಕ ಮಾತನಾಡಿ ವಿವಿಧ ಕಾನೂನು, ಕಾಯಿದೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಸಹಾಯಕ ಸರ್ಕಾರಿ ಅಧಿಯೋಜಕಿ ಇಂದಿರಾ ನಾಯ್ಕ, ಆರ್.ಎನ್.ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಾಧವ್ ಪಿ, ವಿದ್ಯಾನಿಕೇತನ ಪ್ರಾಂಶುಪಾಲ ಡಾ. ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ಸಂಧ್ಯಾ ಮೊಗೇರ ನಿರೂಪಿಸಿದರು, ಗಣಪತಿ ನಾಯ್ಕ ವಂದಿಸಿದರು.