ಶ್ರೀನಿವಾಸಪುರ: ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ನ್ಯಾಷನಲ್ ಇಂಗ್ಗೀಷ್ ಹೈಯರ್ ಪ್ರೈಮರಿ ಸ್ಕೂಲ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ದೇಶದಲ್ಲಿ ವೈಜ್ಞಾನಿಕ ಚಿಂತನೆ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಶಿಕ್ಷಕ ಸಮುದಾಯ ಮುಖ್ಯ ಪಾತ್ರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಭಾರತ ತನ್ನ ಮೊದಲ ಚಂದ್ರಯಾನದಲ್ಲಿ, ಚಂದ್ರನ ಮೇಲೆ ನೀರಿನ ಕಣಗಳು ಇರುವುದನ್ನು ಪತ್ತೆಹಚ್ಚಿತು. ಎರಡನೆ ಯಾನವೂ ಯಶಸ್ವಿಯಾಗಿದ್ದರೂ, ಅಂತಿಮ ಘಟ್ಟದಲ್ಲಿ ಸ್ವಲ್ಪ ಸಮಸ್ಯೆ ಉಂಟಾಯಿತು. ಆದರೂ ನಾವು ಧೃತಿಗೆಡಬೇಕಾದ ಅಗತ್ಯವಿಲ್ಲ. ಸಾಹಸ ಕಾರ್ಯ ಕೈಗೊಂಡಾಗ ಏನೆಲ್ಲಾ ಸಂಭವಿಸಬಹುದು ಅದಕ್ಕೆ ಸಿದ್ಧರಾಗಿರಬೇಕು. ಮತ್ತು ಗೆಲುವಿನ ಮೆಟ್ಟಲು ಹತ್ತಲು ಪ್ರತ್ನಿಸಬೇಕು ಎಂದು ಹೇಳಿದರು.
ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಮಾತನಾಡಿ, ಡಾ.ಎ.ಎಸ್.ಕಿರಣ್ಕುಮಾರ್ ದೆಶ ಕಂಡ ಅಪ್ರತಿಮ ಬಾಹ್ಯಾಕಾಶ ವಿಜ್ಞಾನಿ. ಇವರು ಸ್ಥಳೀಯ ನ್ಯಾಷನಲ್ ಹೈಸ್ಕೂಲ್ನ ಹಳೆ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಹಿರಿಯಣ್ಣನಿಂದ ಸ್ಫೂರ್ತಿ ಪಡೆದು ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆಯಬೇಕು. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಕ್ರಿಡಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಇಸ್ರೋದ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್, ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಹಾಗೂ ಕಾರ್ಯದರ್ಶಿ ಪ್ರೊ. ಎಸ್.ಎನ್.ನಾಗರಾಜರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಎಚ್.ಎಂ.ರಾಮಾಂಜಿನಪ್ಪ, ಶಿಕ್ಷಕರಾದ ಡಿ.ವಿ.ಸಿದ್ದಾರೆಡ್ಡಿ, ಕೆ.ಪ್ರಕಾಶಯ್ಯ, ಲೋಕನಾಥ್, ದಕ್ಷಿಣಾಮೂರ್ತಿ, ಪಿ.ವಿ.ರೇಖಾ, ಬಾಬು ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ