ಮೋದಿ ಸರಕಾರದ ವಿರುದ್ಧ ದಿಗ್ಬಂಧನ ವಿಧಿಸಿ ಅಮೆರಿಕ ಸಂಸತ್ತಿಗೆ ವಿದ್ಯಾರ್ಥಿ ಸಂಘಟನೆಯ ಪತ್ರ

Source: sonews | By Staff Correspondent | Published on 21st December 2019, 10:59 PM | Global News | Don't Miss |

ವಾಷಿಂಗ್ಟನ್: ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಕ್ರಮ ಮತ್ತು ಅಸಾಂವಿಧಾನಿಕವಾಗಿದ್ದು, ಧಾರ್ಮಿಕ ತಾರತಮ್ಯವನ್ನು ಕಾನೂನಿನಲ್ಲಿ ಪ್ರತಿಪಾದಿಸುವ ಸ್ಪಷ್ಟ ಗುರಿ ಹೊಂದಿದೆ. ಆದ್ದರಿಂದ ಮೋದಿ ಸರಕಾರದ ವಿರುದ್ಧ ದಿಗ್ಬಂಧನ ವಿಧಿಸುವಂತೆ ಅಮೆರಿಕದ ವಿದ್ಯಾರ್ಥಿ ಸಂಘಟನೆ ಅಮೆರಿಕ ಸಂಸತ್ತಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದೆ.

 ‘ಕೊಲಂಬಿಯಾ ವಿವಿ ಸೌತ್ ‌ಏಶಿಯನ್ ಆರ್ಗನೈಸೇಷನ್, ಯೇಲ್ ಕಾಲೇಜು ಸೌತ್‌ಏಶಿಯನ್ ಸೊಸೈಟಿ, ಯೇಲ್ ವಿವಿಯ ಸಿಖ್ ವಿದ್ಯಾರ್ಥಿಗಳು, ಬ್ರೌನ್ ವಿವಿ ಮುಸ್ಲಿಮ್ ಸ್ಟೂಡೆಂಟ್ಸ್ ಅಸೋಸಿಯೇಷನ್, ಕ್ಲಾರ್‌ಮೊಂಟ್ ಕಾಲೇಜ್ ಕಮಿಟಿ ಫಾರ್ ಸೌತ್‌ಏಶಿಯನ್ ವಾಯ್ಸಸ್’ ಮುಂತಾದ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಹಾರ್ವರ್ಡ್ ಕಾಲೇಜು ಸೌತ್ ಏಶಿಯನ್ ಅಸೋಸಿಯೇಷನ್, ಪ್ರಿನ್ಸ್‌ಟೌನ್ ವಿವಿಯ ಏಶಿಯನ್ ಅಮೆರಿಕನ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಸದಸ್ಯರು ಪತ್ರಕ್ಕೆ ಸಹಿ ಹಾಕಿಲ್ಲ.

ಯೇಲ್ ಕಾಲೇಜು ಸೌತ್‌ ಏಶಿಯನ್ ಸೊಸೈಟಿಯ ರಾಜಕೀಯ ವಿಭಾಗದ ಅಧ್ಯಕ್ಷೆ ಶ್ರೀಯಾ ಸಿಂಗ್ ಪತ್ರ ಬರೆದಿದ್ದು ಯೇಲ್ ಮುಸ್ಲಿಮ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ಸದಸ್ಯ ಝಿಯಾದ್ ಅಹ್ಮದ್ ಪತ್ರವನ್ನು ಪರಿಷ್ಕರಿಸಿದ್ದಾರೆ. ಡಿಸೆಂಬರ್ 11ರಂದು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಪೌರತ್ವ ಕಾಯ್ದೆಗೆ ಸಂಸತ್ತಿನ ಅನುಮೋದನೆ ಪಡೆಯಿತು. ಭಾರತವನ್ನು ಮುಸ್ಲಿಮರು ಹಾಗೂ ಮುಸ್ಲಿಮೇತರರು ಎಂದು ವಿಭಜಿಸುವ ಈ ಕಾಯ್ದೆ ಧಾರ್ಮಿಕ ತಾರತಮ್ಯವನ್ನು ಪ್ರತಿಪಾದಿಸುವ ಗುರಿ ಹೊಂದಿದೆ. ಹಿಂದುತ್ವವು ಭಾರತದ ಅಸಂಖ್ಯಾತ ವೈವಿಧ್ಯಮಯ ಸಂಸ್ಕೃತಿಯನ್ನು ಅಳಿಸಿ ಹಾಕಿ ದೇಶವನ್ನು ಹಿಂದು ನಾಗರಿಕತೆಯ ದೇಶವೆಂದು ಮರು ವ್ಯಾಖ್ಯಾನಿಸುವ ಹಾಗೂ ಮುಸ್ಲಿಮರನ್ನು ಹೊರಗಿಡುವ ಮತ್ತು ಅವರ ವಿರುದ್ಧ ಹಿಂಸೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಉಗ್ರ ಹಿಂದು ರಾಷ್ಟ್ರೀಯತೆಯ ಸಿದ್ಧಾಂತವನ್ನು ಅನುಸರಿಸುತ್ತಿದೆ. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿರುವ ಆರೆಸ್ಸೆಸ್ ಹಿಂದು ಉಗ್ರವಾದಿಗಳ ತಂಡವಾಗಿದ್ದು ನಿರಂಕುಶ ಪ್ರಭುತ್ವದಿಂದ ಪ್ರೇರಣೆ ಪಡೆದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ದೇಶದಲ್ಲಿ 200 ಮಿಲಿಯ ಜನಸಂಖ್ಯೆಯುಳ್ಳ ಮುಸ್ಲಿಮರನ್ನು ಶೋಷಿಸಲು ಭಾರತ ಕೈಗೊಂಡಿರುವ ಹಲವು ಕ್ರಮಗಳಲ್ಲಿ ಪೌರತ್ವ ಕಾಯ್ದೆಯೂ ಒಂದಾಗಿದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಪೊಲೀಸರು ಕ್ರೂರವಾಗಿ ವರ್ತಿಸಿದ್ದಾರೆ. ಕಳೆದ 4 ತಿಂಗಳಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಶ್ಮೀರದಲ್ಲಿ ಭಾರತ ಸರಕಾರ ಸಂವಹನ ನಿರ್ಬಂಧ ಮತ್ತು ಕರ್ಫ್ಯೂ ವಿಧಿಸಿದೆ. ಅಸ್ಸಾಂನಲ್ಲಿ ಜಾರಿಗೆ ಬಂದಿರುವ ಎನ್‌ಆರ್‌ಸಿ ಅಸ್ಸಾಂನಲ್ಲಿರುವ ಸಾವಿರಾರು ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳಲಿದೆ. 2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಗುಂಪು ಹಲ್ಲೆ ಮತ್ತು ಹತ್ಯೆ ಘಟನೆ ಹಲವು ಪಟ್ಟು ಹೆಚ್ಚಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಭಾರತ ಸರಕಾರ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿಯನ್ನು ಹಿಂಪಡೆಯುವವರೆಗೆ, ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಅಮೆರಿಕದ ಸಂಸತ್ತು ದಿಗ್ಬಂಧನ ವಿಧಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ ಮುಸ್ಲಿಮರ ವಿರುದ್ಧ ಭಾರತ ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ವರ್ತನೆ ತೋರುತ್ತಿದೆ ಎಂದು ಆರೋಪಿಸಲಾಗಿದ್ದು ಭಾರತದ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಗೂ ಮನವಿ ಮಾಡಿಕೊಳ್ಳಲಾಗಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...