ಹೊನ್ನಾವರ: ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಎಸ್ಡಿಎಂ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿ ವಿಶಾಲ ಗೌಡ (17) ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ.
ಮುಗ್ವಾ ಹಳಗೇರಿ ಮೂಲದ ವಿಶಾಲ್ ಪ್ರಥಮ ಪಿಯುಸಿಗೆ ಸೇರಿದ ನಂತರವಷ್ಟೇ ಕೋಟಾದಿಂದ ಕಾಲೇಜಿಗೆ ಬರುತ್ತಿದ್ದ ಎನ್ನಲಾಗಿದೆ. ಕೃಷಿಕರಾಗಿರುವ ತಂದೆ ತಾಯಿಯ ಕಿರಿಯ ಮಗನಾಗಿದ್ದ ಈತನನ್ನು ಚೆನ್ನಾಗಿ ಓದಿಸುವ ಹಂಬಲ ಇಟ್ಟುಕೊಂಡಿದ್ದರೂ ಯಾರಿಗೂ ಹೇಳದೇ ಕೇಳದೇ ಆತ್ಮಹತ್ಯೆಯಂತ ದುಡುಕಿನ ನಿರ್ಧಾರಕ್ಕೆ ಮುಂದಾಗಿರುವುದು ಹೆತ್ತವರನ್ನು ಆಘಾತಕ್ಕೀಡು ಮಾಡಿದೆ.
ಭೀಕರ ದೃಶ್ಯ: ರೈಲಿನ ಗಾಲಿಗೆ ಸಿಕ್ಕು ದೇಹ ಛಿದ್ರವಾಗಿದ್ದು, ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿದ್ದಿದೆ. ಸ್ಥಳಕ್ಕೆ ಮಂಕಿ ಪೊಲೀಸರು ದೌಡಾಯಿಸಿ ಸಾರ್ವಜನಿಕರ ಸಹಕಾರದಿಂದ ಶವವನ್ನು ಸ್ಥಳಾಂತರಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.