ಬೆಲೆಯೇರಿಕೆ, ಜಿಎಸ್ಟಿ ಹೆಚ್ಚಳ, ನಿರುದ್ಯೋಗದ ವಿರುದ್ಧ ದಿಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಸೇರಿದಂತೆ ಹಲವಾರು ನಾಯಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು
ಹೊಸದಿಲ್ಲಿ: ನಿರುದ್ಯೋಗ, ಬೆಲೆಯೇರಿಕೆ ಮತ್ತು ಜಿಎಸ್ಟಿ ಹೆಚ್ಚಳದ ವಿರುದ್ಧ ಶುಕ್ರವಾರ ಬೆಳಗ್ಗೆ ಇಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಸಂಸದ ರಾಹುಲ್ ಗಾಂಧಿಯವರು ಚಾಲನೆ ನೀಡಿದರು ಮತ್ತು ನರೇಂದ್ರ ಮೋದಿ ಸರಕಾರವನ್ನು ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಹೈಜಾಕ್ ಮಾಡಿರುವ ಸರ್ವಾಧಿಕಾರಿ ಆಡಳಿತಕ್ಕೆ ಹೋಲಿಸಿದ ಬೆನ್ನಿಗೇ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
ರಾಷ್ಟ್ರಪತಿ ಭವನಕ್ಕೆ ಜಾಥಾದಲ್ಲಿ ಹೊರಟಿದ್ದ ರಾಹುಲ್ ಮತ್ತು ಶಶಿ ತರೂರ್ ಸೇರಿದಂತೆ ಹಲವಾರು ಕಾಂಗ್ರೆಸ್ ಸಂಸದರನ್ನು ತಡೆದ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಪ್ರತಿಭಟನೆಯ ಸಂಕೇತವಾಗಿ ಸಂಸದರು ಕಪ್ಪು ಉಡುಪು ಧರಿಸಿದ್ದರು.
ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರನ್ನೂ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.
ಪ್ರತಿಭಟನೆಯ ಸಂಕೇತವಾಗಿ ಪಕ್ಷದ ಇತರ ನಾಯಕರಂತೆ ಕಪ್ಪು ಉಡುಪು ಧರಿಸಿದ್ದ ಪ್ರಿಯಾಂಕಾ ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಮುನ್ನ ಬ್ಯಾರಿಕೇಡ್ಗಳನ್ನು ಜಿಗಿದು ನಿಗದಿತ ಸ್ಥಳವನ್ನು ತಲುಪಿ ಕೆಲ ನಿಮಿಷಗಳ ಕಾಲ ಧರಣಿಯನ್ನು ನಡೆಸಿದ್ದರು. ಪ್ರಿಯಾಂಕಾ ಪ್ರತಿರೋಧಿಸಿದಾಗ ಮಹಿಳಾ ಪೊಲೀಸರು ಅವರನ್ನು ಎಳೆದೊಯ್ದು ವಾಹನದಲ್ಲಿ ತುಂಬಿಸಿದರು.
ವಿಜಯ್ ಚೌಕ್ ಬಳಿಯಿಂದ ಪೊಲೀಸ್ ಬಸ್ ನಲ್ಲಿ ತುಂಬಿ ಸಾಗಿಸಲಾದ 64 ಸಂಸದರಲ್ಲಿ ರಾಹುಲ್ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ, ಅಧೀ ರಂಜನ್ ಚೌಧರಿ ಮತ್ತು ಗೌರವ್ ಗೊಗೊಯಿ ಅವರೂ ಸೇರಿದ್ದರು ಎಂದು ಪಕದ ಮೂಲಗಳು ತಿಳಿಸಿದವು.
ವಿಜಯ್ ಚೌಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ರಾಹುಲ್, 'ಬೆಲೆಯೇರಿಕೆಯ ವಿರುದ್ಧ ಧ್ವನಿಯೆ ತಲು ನಾವು ಇಲ್ಲಿದ್ದೇವೆ' ಎಂದರು. ಪ್ರಜಾಪ್ರಭು ತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು. 'ಈ ಶಕ್ತಿಗಳನ್ನು ಪ್ರತಿರೋಧಿಸುವುದು, ಭಾರತ ದಲ್ಲಿ ಪ್ರಜಾಪ್ರಭು ರಕ್ಷಿಸಲ್ಪಡುವಂತೆ ನೋಡಿಕೊಳ್ಳುವುದು ಮತ್ತು ಜನತೆಯ ಸಮಸ್ಯೆಗಳನ್ನು ಮನದಟ್ಟು ಮಾಡಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ನಾವದನ್ನು ಮಾಡುತ್ತಿದ್ದೇವೆ' ಎಂದು ಹೇಳಿದ ರಾಹುಲ್, ಪಕ್ಷದ ಕೆಲವು ಸಂಸದರನ್ನು ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಸರ್ವಾಧಿಕಾರ ಸನ್ನಿಹಿತವಾಗುತ್ತಿದೆ ಮತ್ತು ಈಗ ಆರೆಸ್ಸೆಸ್ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ ಎಂದರು.
ರಾಹುಲ್ ಮತ್ತು ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಜಿಟಿಬಿ ನಗರದ ಕಿಂಗ್ಸ್ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಿರ್ಬಂಧದಲ್ಲಿರಿಸಿದ್ದ ಪೊಲೀಸರು ಸುಮಾರು ಆರು ಗಂಟೆಗಳ ಬಳಿಕ ಅವರನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರಪತಿ ಭವನಕ್ಕೆ ಜಾಥಾ ನಡೆಸಲು ಮತ್ತು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯೋಜಿಸಿದ್ದ ಕಾಂಗ್ರೆಸ್ ಸದಸ್ಯರು ಅದಕ್ಕೂ ಮುನ್ನ ಕಪ್ಪು ಉಡುಪುಗಳನ್ನು ಧರಿಸಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸಂಸತ್ತಿಗೆ ತೆರಳಿದ್ದರು. ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ಸರಕಾರದಿಂದ ಜನರ ಸಮಸ್ಯೆಗಳ ಕಡೆಗಣನೆ ಆರೋಪಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯಿಂದಾಗಿ ಸಂಸತ್ ಕಲಾಪಗಳಿಗೆ ವ್ಯತ್ಯಯವುಂಟಾಗಿತ್ತು.
ಪಕ್ಷದ ಸಂಸದರು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಜಾಥಾ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿತ್ತು. ಸಿಡಬ್ಲ್ಯುಸಿ ಸದಸ್ಯರು ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸ ಮುತ್ತಿಗೆಯಲ್ಲಿ ಪಾಲ್ಗೊಳ್ಳಲಿದ್ದರು. ಆದರೆ ಭದ್ರತಾ ಕಾರಣಗಳಿಂದ ಕಾಂಗ್ರೆಸ್ ಯೋಜನೆಗೆ ಅವಕಾಶ ನೀಡದಿರಲು ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಆಡಳಿತವು ದಿಲ್ಲಿಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಹೇರಿದ್ದು, ಪೊಲೀಸರು ಇದನ್ನು ಉಲ್ಲೇಖಿಸಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿದ್ದರು.
'ನಾವಿಂದು ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ. ಸುಮಾರು ಒಂದು ಶತಮಾನದ ಹಿಂದಿನಿಂದ ಒಂದೊಂದಾಗಿ ಇಟ್ಟಿಗೆಗಳನ್ನು ಜೋಡಿಸಿ ಭಾರತವನ್ನು ನಿರ್ಮಿಸಲಾಗಿತ್ತು. ಅದನ್ನು ಇಂದು ನಿಮ್ಮ ಕಣ್ಣುಗಳ ಮುಂದೆಯೇ ನಾಶಗೊಳಿಸಲಾಗುತ್ತಿದೆ. ಸರ್ವಾಧಿಕಾರವನ್ನು ಹೇರುವ ಈ ಪರಿಕಲ್ಪನೆಯ ವಿರುದ್ಧ ನಿಂತವರ ಮೇಲೆ ಕ್ರೂರ ದಾಳಿ ನಡೆಸಲಾಗುತ್ತಿದೆ, ಜೈಲಿಗೆ ತಳ್ಳಲಾಗುತ್ತಿದೆ ಮತ್ತು ಥಳಿಸಲಾಗುತ್ತಿದೆ' ಎಂದು ರಾಹುಲ್ ಪ್ರತಿಭಟನೆಗೆ ಮುನ್ನ ಟೀಟಿಸಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಬಿಜೆಪಿ, ಕಾಂಗ್ರೆಸ್ನೊಳಗೆ ಪ್ರಜಾಪ್ರಭುತ್ವವಿದೆಯೇ ಎಂದು ಪ್ರಶ್ನಿಸಿದೆ. ಅದು ವಂಶಾಡಳಿತದ ಪಕ್ಷವಾಗಿದೆ ಎಂದು ಬಿಜೆಪಿ ಬಣ್ಣಿಸಿದೆ.