ಭಟ್ಕಳ: ಮಸೀದಿಗಳಿಗೆ ಸೋಂಕು ನಿವಾರಕ ಸಿಂಪಡಣೆ
ಭಟ್ಕಳ: ಜಿಲ್ಲಾಡಳಿತದ ಆದೇಶದ ಅನ್ವಯ ಪುರಸಭೆ ಪೌರಕಾರ್ಮಿಕರು ತಾಲೂಕಿನ ಪ್ರಮುಖ ಏಳು ಮಸೀದಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.
ಕೊರೋನಾ ಭೀತಿಯಿಂದ ಜನರು ತಮ್ಮನ್ನು ತಾವು ಮನೆಯಲ್ಲಿಯೇ ಬಂಧಿಸಿಕೊಂಡಿದ್ದಾರೆ. ಇತ್ತ ಮನೆಯಲ್ಲಿನ ಜನರ ರಕ್ಷಣೆಗೆ ಪೌರಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಶನಿವಾರ ಬೆಳಿಗ್ಗೆಯಿಂದ ತಾಲೂಕಿನ ಪ್ರಮುಖ ಮಸೀದಿಗಳಾದ ಚಿನ್ನದ ಪಳ್ಳಿ, ಸಿದ್ದಿಕ್ ಸ್ಟ್ರೀಟ್, ಜಾಮಿಯಪಳ್ಳಿ ಸೇರಿದಂತೆ ತಾಲೂಕಿನ ಏಳು ಮಸೀದಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.
ಮಸೀದಿಯ ಹೊರಾಂಗಣ ಹಾಗೂ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು. ಅದೇ ರೀತಿ ಮಸೀದಿಯ ಬಾಗಿಲಿಗೂ ಸಹ ಸಿಂಪಡಣೆ ಮಾಡಲಾಯಿತು. ಸೋಡಿಯಂ ಹೈಫೊ ಕ್ಲೋರೈಡ್ ರಾಸಾಯನಿಕ ಮಿಶ್ರಿತ ಸೋಂಕು ನಿವಾರಕ ಇದಾಗಿದೆ. ಎಲ್ಲಾ ಮಸೀದಿಗಳ ಮುಖ್ಯಸ್ಥರ ಪರವಾನಗಿ ಪಡೆದು ಸಿಂಪಡಣೆ ಕಾರ್ಯವನ್ನು ಪೌರಕಾರ್ಮಿಕರಾದ ನಾಗರಾಜ್ ಹಾಗೂ ರವಿ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.