ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಸಿಂಧೂ ಹೊಟೇಲ್ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ಗುರುವಾರ ಅನಿರಿಕ್ಷಿತ ದಾಳಿ ಮಾಡಿದ ರಾಜ್ಯ ಅಬಕಾರಿ ಗುಪ್ತಚರ ಬ್ಯೂರೋ ಅಬಕಾರಿ ಉಪನಿರೀಕ್ಷಕ ಪಿ.ಪ್ರಕಾಶ ಹಾಗೂ ಅವರ ತಂಡ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವಿಸ್ಕಿ, ಬ್ರಾಂದಿ ಸೆರಿದಂತೆ 49 ಲೀಟರ್ಸ್ ನ ಒಟ್ಟು 6ಬಾಕ್ಸ್ ಹಾಗೂ 69 ಲೀಟರ್ಸ್ ನ 9ಬೀಯರ್ ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ವಶಪಡಿಸಿಕೊಂಡ ವಿಸ್ಕಿ ಹಾಗೂ ಬ್ರಾಂದಿಯ ಒಟ್ಟು ಮೊತ್ತ ಸುಮಾರು 35ಸಾವಿರ ರೂ ಎಂದು ಅಂದಾಜಿಸಲಾಗಿದೆ.
ತಂಡದಲ್ಲಿ ಅಬಕಾರಿ ರಕ್ಷಕರಾದ ರಾಜಿವ್ ಬಾಬು, ಶಿವಕುಮಾರ್, ಚಾಲಕ ಶಶಾಂಕ ಇದ್ದರು.
ಸಿಂಧೂ ಹೊಟೇಲ್ನ ಮಾಲಕರು ಯಾವುದೇ ಪರವಾನಿಗೆಯನ್ನು ಪಡೆಯದೆ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಬೆಂಗಳೂರು ಅಬಕಾರಿ ಗುಪ್ತಚರ ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾಗರ ರಸ್ತೆಯಲ್ಲಿರುವ ಈ ಹೊಟೇಲ್ ನಲ್ಲಿ ಕಾನೂನುಬಾಹಿರ ಮದ್ಯ ಮಾರಾಟದ ಕುರಿತಂತೆ ಈ ಹಿಂದೆಯೂ ಹಲವು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದು ಎನ್ನಲಾಗಿದ್ದು ಹೊಟೇಲ್ ಸಮೀಪವೇ ಕಾಲೇಜು, ಆಸ್ಪತ್ರೆ ಹಾಗೂ ಜನವಸತಿ ಇದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು ಎಂದು ಹೇಳಲಾಗುತ್ತಿದೆ.