ಎಂ.ಆರ್.ಮಾನ್ವಿ
ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ ೮ ರಿಂದ ೯ ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುತ್ತಿದ್ದು ಫೆಬ್ರುವರಿ ತಿಂಗಳಿಂದ ಎಸ್.ಎಸ್.ಎಲ್.ಸಿ ಪೂರ್ವಭಾವಿ ಪರೀಕ್ಷೆಗಳು ಆರಂಭಗೊಳ್ಳುತ್ತವೆ. ಇದಕ್ಕಾಗಿ ಶಾಲಾ ಹಂತದಲ್ಲಿ ಮತ್ತು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘವು ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮುಖ್ಯೋಪಾಧ್ಯಯರ ಸಂಘವು ರಾಜ್ಯಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲು ಬೇಕಾದ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಮುದ್ರಿಸಿ ಆಯಾ ಶಾಲೆಗಳಿಗೆ ಪ್ರತಿ ವಿದ್ಯಾರ್ಥಿಗೆ ೩೦ ರೂ ನಂತೆ ಹಣವನ್ನು ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಶಾಲೆಯಿಂದ ಬೇಡಿಕೆಪತ್ರದೊಂದಿಗೆ ಹಣವನ್ನು ಕಳುಹಿಸಲಾಗುತ್ತಿದೆ. ಇದರಲ್ಲಿ ಕೋಟ್ಯಾಂತರ ರೂ ವ್ಯವಹಾರ ನಡೆಯುತ್ತಿದೆ. ಆದರೆ ಕೆಲ ಶಾಲೆಗಳಿಗೆ ಹಣ ತುಂಬಿದ್ದಾಗ್ಯೂ ನಿಗಧಿತ ಪ್ರಮಾಣದಲ್ಲಿ ಉತ್ತರಪತ್ರಿಕೆಯನ್ನು ಕಳುಹಿಸದೆ ಜಿಲ್ಲಾ ಹಾಗೂ ರಾಜ್ಯ ಸಂಘಗಳು ವಂಚಿಸುತ್ತಿವೆ.
ಈ ವರ್ಷ ಬೆಳಗಾವಿ ವಿಭಾಗಮಟ್ಟದಲ್ಲಿ ಪ್ರತ್ಯೇಕ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದು ಹಲವಾರು ಶಾಲೆಗಳಿಗೆ ಉತ್ತರಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆ ಕಳುಹಿಸದೆ ಕೊನೆಯ ಹಂತದ ವರೆಗೂ ವಿದ್ಯಾರ್ಥಿ ಹಾಗೂ ಶಾಲಾ ಮುಖ್ಯಸ್ಥರು ಗೊಂದಲದಲ್ಲಿ ಸಿಲುಕವಂತೆ ಮಾಡಿದ್ದು ಅಲ್ಲದೆ ಹಣವನ್ನು ಪಡೆದುಕೊಂಡೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪರೀಕ್ಷಾ ಸಾಮಾಗ್ರಿಗಳನ್ನು ರವಾನಿಸದೆ ವಂಚಿಸಿದ್ದಾರೆ.
ಅಲ್ಲದೆ ರಾಜ್ಯಮಟ್ಟದಲ್ಲಿ ದಿ.೬.೦೩.೧೭ರಿಂದ ನಡೆಯಬೇಕಾಗಿದ್ದ ಪೂರ್ವಭಾವಿಪರೀಕ್ಷೆಯ ಉತ್ತರ ಹಾಗೂ ಪ್ರಶ್ನೆಪತ್ರಿಕೆಗಳನ್ನು ಸರಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಯ ಮಾದರಿಯಲ್ಲಿ ಕಳುಹಿಸದೆ ಹಳೆಯ ಮಾದರಿಯ ಉತ್ತರಸಹಿತ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿದ್ದು ಈಗ ಮಾನ್ಯ ಆಯುಕ್ತರು ಅದನ್ನು ರದ್ದುಗೊಳಿಸಿ ಆದೇಶವನ್ನು ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹಣ ನೀಡಿಯೂ ಪರೀಕ್ಷೆಯನ್ನು ಬರೆಯದ ಸ್ಥಿತಿಯನ್ನು ನಿರ್ಮಿಸಿದಂತಾಗಿದೆ. ಅಲ್ಲದೆ ಈಗಾಗಲೆ ಹಣವನ್ನು ಭರಿಸಿದ ಶಾಲೆಗಳು ಹಣ ಹೊರೆಯನ್ನು ಹೊರಬೇಕಾಗಿ ಬಂದಿದೆ.
ಆದ್ದರಿಂದ ಮುಂದಿನ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ವಾರ್ಷೀಕ ಪರೀಕ್ಷೆಯ ಮಾದರಿಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೆ ನಿರ್ವಹಿಸಿ ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗುತ್ತಿದೆ.