ಭಟ್ಕಳದ ಎಸ್ಎಸ್ಎಲ್ಸಿ ಟಾಪರ್ ಗಳಿಗೆ ವೈದ್ಯರಾಗುವ ಆಸೆ
ಭಟ್ಕಳ: ರಸ್ತೆ ಸಂಪರ್ಕ ಇರದ ಕುಗ್ರಾಮದಿಂದ ಬಂದು ಭಟ್ಕಳದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕಲಿತ ಹರ್ಷಿತಾ ನಾಯ್ಕ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.
ಹೊನ್ನಾವರ ತಾಲ್ಲೂಕಿನ ಚಿಕ್ಕಿನಕೋಡ ಗ್ರಾಮ ಪಂಚಾಯ್ತಿ ಹಿರಬೈಲ್ ಗ್ರಾಮದ ವಿಷ್ಣು ನಾಯ್ಕ ಅವರ ಮಗಳಾದ ಹರ್ಷಿತಾ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೊನ್ನಾವರ ತಾಲ್ಲೂಕಿನ ಹಿರೆಬೈಲ್ ಗ್ರಾಮ ಕುಗ್ರಾಮವಾಗಿದ್ದು ಕಾಲುಸಂಕ ದಾಟಿ ಗ್ರಾಮಕ್ಕೆ ಹೋಗಬೇಕು. ಚಿಕ್ಕನಗೋಡ ಗ್ರಾಮ ಪಂಚಾಯ್ತಿಯಿಂದ 8 ಕಿ.ಮೀ ದೂರ ಇರುವ ಈ ಗ್ರಾಮದ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಾಲೆಗೆ ಬರಬೇಕಾದರೆ ನಡೆದುಕೊಂಡು ಬರಬೇಕು.
ಬಾಲ್ಯದಲ್ಲಿ ಮಗಳ ಚುರುಕುತನ ಗಮನಿಸಿದ ಕೃಷಿಕ ವಿಷ್ಣು ನಾಯ್ಕ ಭಟ್ಕಳ ವಸ್ತಿ ಶಾಲೆಗೆ ಮಗಳನ್ನು ದಾಖಲು ಮಾಡಿದರು. ಡಾಕ್ಟರ್ ಆಗಬೇಕೆಂಬ ಕನಸು ಹೊತ್ತು ಹರ್ಷಿತಾ ವಸತಿ ಶಾಲೆಯಲ್ಲಿ ನೀಡುವ ಶಿಕ್ಷಣದ ಜೊತೆಗೆ ಹೆಚ್ಚುವರಿ 5 ತಾಸು ವಿದ್ಯಾಭ್ಯಾಸ ಮಾಡಿ ಯಾವುದೇ ಖಾಸಗಿ ಟ್ಯೂಷನ್ ಪಡಯದೆ ಈ ಸಾಧನೆ ಮಾಡಿದ್ದಾಳೆ.
ಇದೇ ವಸತಿ ಶಾಲೆಯ ಜೀವಿತಾ ಮಂಜುನಾಥ ನಾಯ್ಕ 623 ಅಂಕ ಪಡೆದಿದ್ದಾಳೆ. ತಾಲ್ಲೂಕಿನ ಮುಂಡಳ್ಳಿ ನಿವಾಸಿಯಾದ ಜೀವಿತಾಳ ತಂದೆ ಮಂಜುನಾಥ ನಾಯ್ಕ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈಕೆಗೂ ಡಾಕ್ಟರ್ ಆಗುವ ಬಯಕೆಯಿದೆ. ಬಡಕುಟುಂಬದಲ್ಲಿ ಜನಿಸಿದ ಈಕೆ ಯಾರ ಪ್ರೋತ್ಸಾಹ ಇಲ್ಲದೇ ಶ್ರಮಪಟ್ಟು ಓದಿ ಸಾಧನೆ ಮಾಡಿದ್ದಾಳೆ.
ಇಬ್ಬರೂ ವಿದ್ಯಾರ್ಥಿಗಳು ರಾಷ್ಟೋತ್ಥಾನ ಸಾಧನಾ ಪ್ರಕಲ್ಪದಡಿ ಉಚಿತ ನೀಟ್ ಹಾಗೂ ಪಿಯುಸಿ ಶಿಕ್ಷಣ ಪಡೆಯಲು ಆಯ್ಕೆಯಾಗಿದ್ದಾರೆ. ಜಿಲ್ಲೆಯಿಂದ ಆಯ್ಕೆಯಾದ ಐವರು ವಿದ್ಯಾರ್ಥಿಗಳಲ್ಲಿ ಈ ಇಬ್ಬರೂ ಸೇರಿದ್ದಾರೆ. ಮುಂದಿನ ಶಿಕ್ಷಣವನ್ನು ಇವರು ಬೆಂಗಳೂರಿನಲ್ಲಿ ಪಡೆಯಲಿದ್ದಾರೆ.