ಧಾರವಾಡ: ಪೊಲೀಸ್ ವೃತ್ತಿ ಕಠಿಣವಾಗಿದ್ದರೂ ಸಾಮಾಜಿಕ ಋಣ ತೀರಿಸಲು ಒಂದು ಉತ್ತಮ ಅವಕಾಶ. ಬ್ರಷ್ಟಾಚಾರ ರಹಿತ ಆಡಳಿತ ನೀಡಲು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಶ್ರಮಿಸಬೇಕೆಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಹೇಳಿದರು.
ಅವರು ಇಂದು ಸಂಜೆ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.
ಪೊಲೀಸ್ ವೃತ್ತಿ ಕಠಿಣವೆನಿಸಿದರೂ ಸಮಾಜ, ಸಾರ್ವಜನಿಕರು, ಸಾರ್ವಜನಿಕ ಆಸ್ತಿ-ಪ್ರಾಣ ಉಳಿಸುವ ಮೂಲಕ ಉನ್ನತ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ.
ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಸಾಮಾಥ್ರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಕ್ರೀಡೆಗಳಲ್ಲಿ ಸ್ಪರ್ಧಾ ಮನೋಭಾವದ ಜೊತೆಗೆ ಉತ್ತಾಹದಿಂದ ಭಾಗವಹಿಸಿ, ಆನಂದಿಸಬೇಕೆಂದು ಅವರು ಹೇಳಿದರು.
ಪ್ರತಿ ಸೋಮವಾರ ಅರ್ಧ ದಿನವನ್ನು ಬೆಳಗಾವಿ ವಲಯದ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೀಸಲಿಟ್ಟು ಅವರ ಕಷ್ಟ, ಸುಖ ಕೇಳುವ ಅವಕಾಶವನ್ನು ನನ್ನ ಕಚೇರಿಯಲ್ಲಿ ಮಾಡಿದ್ದೇನೆ.
ಅಧಿಕಾರಿ, ಸಿಬ್ಬಂದಿಗಳು ತಮ್ಮ ಯಾವುದೇ ಬೇಡಿಕೆಗಳಿದ್ದಲ್ಲಿ ನನ್ನ ಕಚೇರಿಗೆ ಬಂದು ಮುಕ್ತವಾಗಿ ಚರ್ಚಿಸಬಹುದು. ಬ್ರಷ್ಟಾಚಾರ ರಹಿತವಾದ ಆಡಳಿತವನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶ ನನ್ನದು. ಪ್ರಜೆಗಳಿಗೆ ತೊಂದರೆ ನೀಡಿದ ಕುರಿತು ದೂರು ಬಂದಲ್ಲಿ ಅದೇ ಸೋಮವಾರ ಆ ಕುರಿತು ತೀರ್ಮಾಣ ಮಾಡುತ್ತೇನೆ. ಆದ್ದರಿಂದ ಪ್ರಜೆಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಂತ್ವಾನ ಹೇಳಬೇಕು. ಇದರಿಂದ ಇಲಾಖೆ ಗೌರವ, ವರ್ಚಸ್ಸು ಹೆಚ್ಚುತ್ತದೆ ಮತ್ತು ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಹೆಚ್ಚಿ, ಗೌರವ ಮೂಡುತ್ತದೆ ಎಂದು ಐಜಿಪಿ ರಾಘವೇಂದ್ರ ಹೇಳಿದರು.
ಪೊಲೀಸ್ ಸಿಬ್ಬಂದಿಗಳು ಪೊಲೀಸ್ ವೃತ್ತಿ ಮತ್ತು ಜೀವನವನ್ನು ಒಟ್ಟಿಗೆ ಸ್ವೀಕರಿಸಿ ಮುನ್ನಡೆಯಬೇಕು. ಇಲಾಖೆ ನೀಡಿರುವ ರಜೆಗಳನ್ನು ಬಳಸಿಕೊಂಡು ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಬೇಕು. ಕ್ರೀಡೆ, ಓದು, ಮುಂತಾದ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಜೀವನವನ್ನು ಅನುಭವಿಸಲು ನಿವೃತ್ತಿವರೆಗೆ ಕಾಯದೆ ಪ್ರತಿದಿನ ಕೆಲಸದೊಂದಿಗೆ ಜೀವನವನ್ನು ಅನುಭವಿಸಿ ತೃಪ್ತಿಯಿಂದ ಇರಬೇಕೆಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ನಾಯ್ಕ ಸ್ವಾಗತಿಸಿ, ವಂದಿಸಿದರು. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಶಿಕ್ಷಕ ಡಾ.ಎ.ಸಿ. ಅಲ್ಲಯ್ಯನವರಮಠ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಜ್ಯೋತಿಯನ್ನು ಪೊಲೀಸ್ ಸಿಬ್ಬಂದಿ ಎಂ.ಡಿ. ಮಸ್ತಾನ ಅವರು ಕ್ರೀಡಾಂಗಣಕ್ಕೆ ತಂದರು.
ಕ್ರೀಡಾಕೂಟದ ಉಸ್ತುವಾರಿ ಹಾಗೂ ವ್ಯವಸ್ಥಾಪನೆಯನ್ನು ಡಿಎಆರ್ ನ ಡಿವೈಎಸ್ಪಿ ಶಿವಾನಂದ ಚನ್ನಬಸಪ್ಪ, ಡಿಸಿಆರ್ಬಿಯ ಡಿವೈಎಸ್ಪಿ ಗುರು ಮತ್ತೂರ, ಧಾರವಾಡ ಗ್ರಾಮೀಣ ಪಿಎಸ್ಐ ಮಂಜುನಾಥ ನಾಯಕ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸಿಪಿಐ, ಪಿಎಸ್ಐ ಗಳು ವಹಿಸಿದ್ದರು.
400 ಮೀಟರ್ ಓಟ ಸ್ಪರ್ಧೆ : ಜಿಲ್ಲಾ ಪೊಲಿಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟವನ್ನು ಬೆಳಗಾವಿ ಉತ್ತರ ವಲಯ ಪೊಲಿಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಅವರು ಪಾರಿವಾಳ ಹಾಗೂ ಬಣ್ಣದ ಬಲೂನ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
ನಂತರ ಅವರು ಕ್ರೀಡಾಕೂಟದ 400 ಮೀಟರ್ ಪುರುಷ ಸಿಬ್ಬಂದಿ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. 400 ಮೀಟರ್ ಓಟದಲ್ಲಿ ಎಂ.ಡಿ. ಮಸ್ತಾನ ಪ್ರಥಮ ಸ್ಥಾನವನ್ನು, ಹುಲಿಯಪ್ಪ ಕುರುಬರ ದ್ವಿತೀಯ ಸ್ಥಾನವನ್ನು ಮತ್ತು ಪಿ.ಪಿ. ದಡಕೆ ತೃತೀಯ ಸ್ಥಾನವನ್ನು ಪಡೆದರು.