ಮಂಡ್ಯ/ನಾಗಮಂಗಲ: ದೇಶಾದ್ಯಂತ ಸಂಚಲನ ಮೂಡಿಸಿರುವ ಭಾರತ್ ಜೋಡೊ ಪಾದಯಾತ್ರೆಗೆ ಪುತ್ರ ರಾಹುಲ್ ಗಾಂಧಿ ಜತೆ ತಾಯಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿ ಯಾತ್ರೆಗೆ ಹೊಸ ಹುರುಪು ನೀಡಿದ್ದಾರೆ.
ಗುರುವಾರ ಪಾಂಡವಪುರದ ಬೆಳ್ಳಾಳೆ ಸಮೀಪದ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ, ಪಕದ ನಾಯಕರು ಮತ್ತು ಅಪಾರ ಕಾರ್ಯಕರ್ತರೊಂದಿಗೆ ಯಾತ್ರೆ ಆರಂಭಿಸಿದರು.
ಮಾರ್ಗಮಧ್ಯೆ ಜಕ್ಕನಹಳ್ಳಿ ಸರ್ಕಲ್ ಬಳಿ ನ್ಯಾಮನಹಳ್ಳಿ ಗ್ರಾಮದಲ್ಲಿ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಸೇರಿಕೊಂಡು ಪುತ್ರನೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಜನಸ್ತೋಮದಿಂದ ಜೈಕಾರ ಮೊಳಗಿತು.
ಸೋನಿಯಾ ತನ್ನ ಬಳಿ ಬಂದ ಬಾಲಕಿಯ ಬೆನ್ನು ನೇವರಿಸಿ ಮಮತೆ ತೋರಿದರು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಜತೆ ತಾಯಿಯನ್ನು ನಗುಮೊಗದಿಂದ ಸ್ವಾಗತಿಸಿದ ರಾಹುಲ್ ಗಾಂದಿ, ಅವರ ಕಾಲಿಗೆ ನಮಿಸಿ, ಶೂಗಳ ಲೇಸ್ ಕಟ್ಟುವ ಮೂಲಕ ಯಾತ್ರೆಗೆ ಆಹ್ವಾನ ನೀಡಿದರು.
ನಾಯಕರು, ಕಾರ್ಯಕರ್ತರೊಂದಿಗೆ ಮುಗಳಗೆಯಲ್ಲಿ ಸಂಭಾಷಿಸುತ್ತಾ, ನೆರೆದಿದ್ದ ಜನರತ್ತ ಕೈಬೀಸಿ, ಕೈಮುಗಿದು ಹುರುಪಿನಿಂದ ಸೋನಿಯಾ ಗಾಂಧಿ, ಪಾಂಡವಪುರ ಗಡಿದಾಟಿ ನಾಗಮಂಗಲದ ಖರಡ್ಯ ಗ್ರಾಮದವರೆಗೆ ಸುಮಾರು 9 ಕಿ.ಮೀ. ಕ್ರಮಿಸಿ ನಿರ್ಗಮಿಸಿದರು.
ನಾಗಮಂಗಲ ತಾಲೂಕಿನ ಗಡಿಗೆ ಬಂದ ಪಾದಯಾತ್ರೆಯನ್ನು ಪೂರ್ಣಕುಂಭ ಕಳಸ ಹೊತ್ತ ಪಕ್ಷದ ಮಹಿಳಾ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಖರಡ್ಕ ಕೆರೆ ದಂಡೆಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಬಿಡಾರದಲ್ಲಿ ಮುಖಂಡರು ವಿಶ್ರಾಂತಿ ಪಡೆದರು. ಇದೇ ವೇಳೆ ರಾಹುಲ್ ಗಾಂಧಿ ರೈತರ ಜತೆ ಸಂವಾದ ನಡೆಸಿ ಸಮಸ್ಯೆ ಆಲಿಸಿ, ಸಂಜೆ 4 ಗಂಟೆಗೆ ನಾಗಮಂಗಲದ ಕಡೆಗೆ ಪಾದಯಾತ್ರೆ ಮುಂದುವರಿಸಿದರು.
ಸಹಸ್ರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಖರಡ್ಯದಿಂದ ಮತ್ತೆ ಪಾದಯಾತ್ರೆ ಸಾಗಿತು. ಚೀಣ್ಯ, ಹೊಣಕೆರೆ, ಬಿ.ಜಿ.ಎಸ್. ವೃತ್ತದ ಮೂಲಕ ಇಳಿಸಂಜೆ ವೇಳೆಗೆ ಬ್ರಹ್ಮದೇವರಹಳ್ಳಿ ತಲುಪಿ ದಿನದ ಯಾತ್ರೆ | ಸಮಾಪ್ತಿಗೊಂಡಿತು. ಇಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ರಾಹುಲ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಯಾತ್ರೆಯಲ್ಲಿ ಪಕ್ಷದ ರಾಷ್ಟ್ರ ನಾಯಕರಾದ ಜೈರಾಂ ರಮೇಶ್, ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ, ಸಿ.ಡಿ.ಗಂಗಾಧರ್, ಹಲವು ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.