4 ಕೋಟಿ ಮೊತ್ತದ “ಹೆಬ್ಬಾರ ರೇಷನ್ ಕಿಟ್” ನ ಮೂಲ ಬಹಿರಂಗ ಪಡಿಸುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹ
ಶಿರಸಿ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಷೇತ್ರದ ಶಾಸಕ ಮತ್ತು ಸಚಿವ ಶಿವರಾಮ ಹೆಬ್ಬಾರ ಲಾಕ್ಡೌನ್ ಸಂದರ್ಭದಲ್ಲಿ ವಿತರಿಸಿದ 4 ಕೋಟಿ ಮೊತ್ತದ “ಹೆಬ್ಬಾರ ರೇಷನ್ ಕಿಟ್” ನ ಧಾನ್ಯದ ಮತ್ತು ಧನದ ಮೂಲವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಿಸಲು ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ರವೀಂದ್ರ ನಾಯ್ಕ ಸಚಿವರನ್ನ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಇಗಾಗಲೇ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಆಗದೇ ಕಾರ್ಮಿಕ ಇಲಾಖೆಯ ಕಿಟ್ಗಳ ಹಂಚುವಿಕೆಯಲ್ಲಿ ವ್ಯಾಪಕವಾಗಿ ಗೊಂದಲ ಮತ್ತು ಸಾರ್ವಜನಿಕವಾಗಿ ಸಂಶಯಕ್ಕೆ ಕಾರಣವಾಗಿರುವುದರಿಂದ ಸಚಿವರಿಗೆ ಮೇಲಿನಂತೆ ಮಾಹಿತಿಗಾಗಿ ಇಂದು ಅಗ್ರಹಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಸಚಿವರು ಯಲ್ಲಾಪುರ ವಿಧಾನಸಭಾ ಕ್ಷೇತ್ರದ 51,168 ಬಿಪಿಎಲ್ 2,760 ಅಂತ್ಯೋದಯ ಹಾಗೂ ಮಂಜೂರಿಗೆ ಬಾಕಿ ಇರುವ 500 ಬಿಪಿಎಲ್ ಅರ್ಜಿ ಸೇರಿ ಒಟ್ಟು 54,428 ಕುಟುಂಬಕ್ಕೆ ಅಂದಾಜು 4 ಕೋಟಿ ರೂಪಾಯಿ ಮೊತ್ತದ ದಿನಸಿ ಕಿಟ್ ವಿತರಿಸುತ್ತಿದ್ದೇನೆ ಎಂದು ಕಿಟ್ ವಿತರಿಸುವ ಸಂದರ್ಭದಲ್ಲಿ ಹೇಳಿದ ಹೇಳಿಕೆ ಮಾಧ್ಯಮದಲ್ಲಿ ಪ್ರಕಟಗೋಂಡಿದ್ದವು.
ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕರ ಸ್ವಂತ ಹಣದ ಕಾರ್ಮಿಕ ಇಲಾಖೆಯ ಕಿಟ್ಗಳನ್ನ ಕಾರ್ಮಿಕರಿಗೆ ಹಂಚದೇ, ಕೇವಲ ಪಕ್ಷದ ಚಿಹ್ನೆ ಹಾಗೂ ಮುಖಂಡರ ಫೋಟೊವಿರುವ ಚಿತ್ರದೊಂದಿಗೆ ಕ್ಷೇತ್ರದಲ್ಲಿ ಕಿಟ್ ಹಂಚಿರುವುದರಿಂದ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿರುವುದರಿಂದ ಸಚಿವರ ಸ್ಪಷ್ಟೀಕರಣ ಬಯಸಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ: ಕಾರ್ಮಿಕ ಕಿಟ್ ಇಲ್ಲ: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಮತ್ತು ಇತರೇ ಕಟ್ಟಡ ಕಾರ್ಮಿಕರಿಗೆ 750 ರೂಪಾಯಿ ದಿನಸಿ ಸಾಮಗ್ರಿ ಕಿಟ್ ಪ್ರತಿಯೊಬ್ಬ ಕಾರ್ಮಿಕರಿಗೂ ವಿತರಿಸಲು ಸರಕಾರದ ಅನುಮೋದನೆಯಂತೆ ಕಾರ್ಮಿಕ ಇಲಾಖೆಯ ತಲೆಬರಹದೊಂದಿಗೆ ಇರುವ ಕಿಟ್ಗಳು ಶಾಸಕರೇ, ಕಾರ್ಮಿಕ ಇಲಾಖೆಯ ಸಚಿವರಿದ್ದರೂ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ ಮತ್ತು ಬನವಾಸಿ ಭಾಗಕ್ಕೆ ಒಂದೂ ಕಾರ್ಮಿಕ ರೇಷನ್ ಕಿಟ್ ಇಲ್ಲಿಯವರೆಗೂ ವಿತರಣೆ ಆಗದೇ ಇರುವುದು ಆಶ್ಚರ್ಯಕರ ಸಂಗತಿ. ಕಾರ್ಮಿಕ ಸಚಿವರಿದ್ದೂ ಕಾರ್ಮಿಕ ಇಲಾಖೆಯ ರೇಷನ್ ಕಿಟ್ ಕ್ಷೇತ್ರದ ಕಾರ್ಮಿಕರಿಗೆ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ರವೀಂದ್ರ ನಾಯ್ಕ ಪ್ರತಿಕ್ರಿಯೀಸಿದ್ದಾರೆ.