ಭಟ್ಕಳ: ಚಲಿಸುತ್ತಿರುವ ಬೈಕ್ ಮೇಲೆ ವಿಷ ಸರ್ಪವೊಂದು ದಾಳಿ ಮಾಡಿದ್ದು ಬೈಕ್ ನ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಜಾಲಿ ಗ್ರಾಮದಲ್ಲಿ ನಡೆದಿದೆ.
ಸರ್ಪದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ಫೈರೋಝ್ ಆಹ್ಮದ್ ಮೊಖ್ತಸರ್ (23) ಎಂದು ಗುರುತಿಸಲಾಗಿದ್ದು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಗಂಭೀರ ಸ್ಥಿತಿಯನ್ನು ಕಂಡ ವೈದ್ಯರು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದು ಈಗ ಆತನ ಆರೋಗ್ಯ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ವಿವರ: ನೌಶಾದ್ ಹಾಗೂ ಫೈರೋಝ್ ಆಹ್ಮದ್ ಎಂಬ ಇಬ್ಬರು ಯುವಕರು ಬೈಕ್ ನಲ್ಲಿ ಜಾಲಿಯಿಂದ ಮಗ್ದೂಮ್ ಕಾಲೋನಿಗೆ ಹೋಗುತ್ತಿರಬೇಕಾದರೆ ರಸ್ತೆ ಬದಿಯಲ್ಲಿದ್ದ ವಿಷಸರ್ಪವೊಂದು ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಹೆದರಿಕೊಂಡ ನೌಶಾದ್ ಸರ್ಪವನ್ನು ಕಾಲಿನಿಂದ ಜಾಡಿಸಿದ್ದಾನೆ. ಅದು ಹಿಂಬದಿ ಸವಾರ ಫೈರೋಝ್ ನ ಕಾಲಿನ ಬಿದ್ದು ತೊಡೆಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ.