ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

Source: sonews | By Staff Correspondent | Published on 4th December 2020, 5:18 PM | Coastal News |

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ಕಂದಾಯ ಇಲಾಖೆಗೆ ಅಧಿಸೂಚನೆ ನೀಡಿ 50 ವರ್ಷವಾದರೂ ಅರಣ್ಯ ಇಲಾಖೆ ಭೂಮಿ ಹಸ್ತಾಂತರಿಸದೇ ಇರುವುದು ಖಂಡನಾರ್ಹ. ಸರ್ಕಾರದ ಆದೇಶ ನಿರ್ಲಕ್ಷಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ತುರ್ತು ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ , ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. 

ಅವರು ಶುಕ್ರವಾರ ಶಿರಸಿ ಉಪವಿಭಾಗಾಧಿಕಾರಿ ಕಛೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಬಿಡುಗಡೆ ಮಾಡುತ್ತಾ ಅತಿ ಶೀಘ್ರದಲ್ಲಿ ಅರಣ್ಯ ಇಲಾಖೆಯು ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು. ಇಲ್ಲದಿದ್ದಲ್ಲಿ, ಜಿಲ್ಲೆಯಾಯದ್ಯಂತ ಅರಣ್ಯ ಇಲಾಖೆಯ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಅವರು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.   
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಳೀಕರಿಗೆ ಕಾಫಿ ಮತ್ತು ಕೃಷಿ ಚಟುವಟಿಕೆಗೆ ತೊಡಗಿಸಿಕೊಂಡು ಆಹಾರ ಉತ್ಪನ್ನ ಹೆಚ್ಚಿಸುವ ಹಾಗೂ ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ 47,708 ಎಕರೆ, 19 ಗುಂಟೆ 8 ಆಣೆ  ಕ್ಷೇತ್ರವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರವು ಏಪ್ರಿಲ್ 16, 1969 ರಂದು ಅಧಿಸೂಚನೆ ಮೂಲಕ ಪ್ರಕಟಿಸಿತ್ತು ಆದರೆ, ಇಲ್ಲಿಯವರೆಗೂ ಅರಣ್ಯ ಇಲಾಖೆ ಹಸ್ತಾಂತರಿಸದಿರುವುದು ಖೇದಕರ. ಈ ದಿಶೆಯಲ್ಲಿ ಜಿಲ್ಲಾಡಳಿತವು ಕಾನೂನು ಕ್ರಮ ಜರುಗಿಸಿ ದಾಖಲೆಯಲ್ಲಿ  ಅರಣ್ಯ ಇಲಾಖೆಯ ಹೆಸರು ಪ್ರಸ್ತಾಪವಾಗಿರುವುದು ಕಾನೂನು ಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಇರುವುದರಿಂದ ಸದ್ರಿ ಕ್ಷೇತ್ರ ಕಂದಾಯ ಇಲಾಖೆಗೆ ಕಾನೂನುಬದ್ಧವಾಗಿ ಹಸ್ತಾಂತರಿಸಿಕೊಳ್ಳಲು ಅವಕಾಶ ಇರುವುದರಿಂದ ಸೂಕ್ತ ಕ್ರಮ ಜರುಗಿಸುವಂತೆ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. 

23,000 ಕುಟುಂಬಕ್ಕೆ ಹಕ್ಕು: ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಕಾರ ಕಂದಾಯ ಇಲಾಖೆಗೆ 47,708 ಎಕರೆ ಪ್ರದೇಶ ಹಸ್ತಾಂತರಗೊಂಡಲ್ಲಿ, ಸದ್ರಿ ಕ್ಷೇತ್ರದಲ್ಲಿ ವಾಸ್ತವ್ಯ ಮತ್ತು ಕೃಷಿ ಚಟುವಟಿಕೆ ಮಾಡುತ್ತಿರುವ ಸುಮಾರು 23,000 ಕುಟುಂಬಗಳಿಗೆ ಅರಣ್ಯ ಕಾಯಿದೆ ಮತ್ತು ಸರ್ವೋಚ್ಛ ನ್ಯಾಯಾಲಯದ ಕಾನೂನಿನ ಮಿತಿಯ ವ್ಯಾಪ್ತಿಗೆ ಬರದೇ ಇರುವುದರಿಂದ ಈ ಕುಟುಂಬಗಳಿಗೆ ಕಂದಾಯ ಇಲಾಖೆಯೇ 23,000 ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸಾಧ್ಯವೆಂದು ರವೀಂದ್ರ ನಾಯ್ಕ ಹೇಳಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...