ಬೆಂಗಳೂರು: ಪಠ್ಯ ಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿ ಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗ ಬೇಕು. ಬದಲಿಗೆ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯತೀತ ರಾಷ್ಟ್ರ ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿ ಪಾದಿಸಿದ್ದಾರೆ.
ಸೋಮವಾರ ಜಯನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆತ್ತವರಿಗೆ ಹೆಗ್ಗಣ ಮುದ್ದು ರೀತಿ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಹೆಡಗೇವಾರ್ ವಿಷಯ ಪಠ್ಯಕ್ಕೆ ಸೇರಿದರೆ ಯಾವ ಸಮಸ್ಯೆ ಇಲ್ಲ. ನಾಗೇಶ್ ಆರೆಸೆಸ್ಸಿನವರು, ಹೆಡಗೆವಾರ್ ಆರೆಸ್ಸೆಸ್ ಸಂಸ್ಥಾಪಕರು. ನಾಳೆ ಗೋಡೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂದರೆ? ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರು, ದೇಶಪ್ರೇಮ ಇರುವವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿದರೆ ನಾವು ಬೇಡ ಎಂದು ಹೇಳುವುದಿಲ್ಲ ಎಂದು ತೀಕ್ಷ್ಯ ಪ್ರತಿಕ್ರಿಯೆ ನೀಡಿದರು.
ರೋಹಿತ್ ಚಕ್ರತೀರ್ಥ ಆರೆಸ್ಸೆಸ್ನವರು, ಅವರ ಬದಲು ಯಾವುದೇ ಪಕ್ಷ ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರಾಗಿ ಮಾಡಿ ಎಂದು ಸಿದ್ದರಾಮಯ್ಯ ಅವರು ಸರಕಾರವನ್ನು ಆಗ್ರಹಿಸಿದರು.
ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದದ ಮೌಲ್ಯಗಳು ಉದ್ದೀಪನವಾಗುತ್ತದೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು, ಇಂಥವರ ಬಗ್ಗೆ ಮಕ್ಕಳಿಗೆ ಹೇಳಿ, ಮಕ್ಕಳ ಜ್ಞಾನ ವಿಕಾಸವಾಗಬೇಕೋ? ಸಂಕುಚಿತವಾಗಬೇಕೋ? ವೈಚಾರಿಕತೆ ಬೆಳೆಸಿಕೊಳ್ಳಬೇಕೋ? ಬೇಡವೋ? ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು.