ಶ್ರೀನಿವಾಸಪುರ: ಕೊಳೆಗೇರಿ ನಿವಾಸಿಗಳಿಗೆ 600ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ಕೊಳೆಗೇರಿಯಲ್ಲಿ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸರ್ವರಿಗೂ ಸೂರು ಯೋಜನೆಯಡಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮನೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಮಂಜೂರಾಗಿರುವ 600 ಮನೆಗಳ ಪೈಕಿ ಕಟ್ಟೆ ಕೆಳಗಿನ ಪಾಳ್ಯಕ್ಕೆ 67, ಜಗಜೀವನ ಪಾಳ್ಯಕ್ಕೆ 148, ಜಾಕೀರ್ ಹುಸೇನ್ ಮೊಹಲ್ಲಾಗೆ 150, ಸಂತೆ ಮೈದಾನಕ್ಕೆ 184 ಹಾಗೂ ಅಂಬೇಡ್ಕರ್ ಪಾಳ್ಯಕ್ಕೆ 51 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ಮನೆಯನ್ನು ರೂ.4.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಮನೆಗಳ ನಿರ್ಮಾಣದ ಒಟ್ಟು ವೆಚ್ಚ ರೂ.38 ಕೋಟಿ ಆಗುತ್ತದೆ ಎಂದು ಹೇಳಿದರು.
ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಸ್ವಚ್ಛತೆ ಕಾಪಾಡಲು ಅನುಕೂಲವಾಗುವಂತೆ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ಇನ್ನೂ 100 ಮನೆಗಳ ಅಗತ್ಯವಿದ್ದು, ಮುಂದೆ ನಿರ್ಮಿಸಿಕೊಡಲಾಗುವುದು. ಫಲಾನುಭವಿಗಳಿಗೆ ಮನೆಯ ಖಾತೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಪಟ್ಟಣದ ಕ್ರೀಡಾಂಗಣದ ಸಮೀಪ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ ಕೆಲವರು ಈ ಬಗ್ಗೆ ನ್ಯಾಯಾಲಯದ ಮೆಟ್ಟಲು ಹತ್ತಿದ್ದಾರೆ. ಸಮಸ್ಯೆ ಇತ್ಯರ್ಥವಾದ ಕೂಡಲೆ ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗುವುದು. ಜಾತಿ, ಮತ, ಪಕ್ಷ ಭೇದವಿಲ್ಲದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ನಿಡಲಾಗುತ್ತಿದೆ ಎಂದು ಹೇಳಿದರು.
‘ಕ್ಷೇತ್ರದಲ್ಲಿ ಯಾವುದೇ ಚುನಾವಣೆ ಇಲ್ಲದಿದ್ದರೂ, ಅಭಿವೃದ್ಧಿ ಕಾರ್ಯ ನಿಲ್ಲುವುದಿಲ್ಲ. ಬಡವರು ಗೌರವದಿಂದ ಬದುಕುವ ಪರಿಸರ ಕಲ್ಪಿಸುವುದು ನನ್ನ ಗುರಿ. ಯಾರನ್ನೂ ಟೀಕಿಸುವುದಿಲ್ಲ. ಬಡವರ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೊಪಾಲಕೃಷ್ಣ, ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಬರ್ ಷರೀಫ್, ಸಂಜಯ್ ರೆಡ್ಡಿ, ಮುಖಂಡರಾದ ಆಲವಟ್ಟ ಮಂಜುನಾಥರೆಡ್ಡಿ, ಜಿ.ಗೋವಿಂದಗೌಡ, ಬಿ.ಎಲ್.ರಾಮಣ್ಣ, ಎಲ್.ವಿ.ಗೋವಿಂದಪ್ಪ, ಬಿ.ಎಲ್.ಪ್ರಕಾಶ್, ಮುಕ್ತಿಯಾರ್ ಅಹ್ಮದ್, ಕೃಷ್ಣೇಗೌಡ, ಆರ್.ಎನ್.ಚಂದ್ರಶೇಖರ್, ಚಂದ್ರೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಮಣಿ, ಸಹಾಯಕ ಎಂಜಿನಿಯರ್ ರಾಜ್ಕುಮಾರ್ ಇದ್ದರು.