ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಮಣಗುತ್ತಿ ಗ್ರಾಮದಲ್ಲಿ ಉಂಟಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ತೆರವು ವಿವಾದ ಬಗೆಹರಿದಿದೆ.
ಗ್ರಾಮದಲ್ಲಿ ಮಂಗಳವಾರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಸೇರಿದ್ದ ವಿವಿಧ ಸಮುದಾಯಗಳ ಮುಖಂಡರು, ಹೋದ ವರ್ಷ ಚರ್ಚೆಯಾಗಿದ್ದಂತೆ ಶಿವಾಜಿ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ವಾಲ್ಮೀಕಿ ಹಾಗೂ ಶ್ರೀಕೃಷ್ಣ ಪ್ರತಿಮೆಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸುವ ಬಗ್ಗೆ ತೀರ್ಮಾನಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಗುತ್ತಿ, ಬೊಶ್ಯಾನಹಟ್ಟಿ, ಬೆನಕನಹೊಳಿ ಮುಖಂಡರು ಪಾಲ್ಗೊಂಡಿದ್ದರು.
ಗ್ರಾಮದ ಹೊರವಲಯದ ಬಸವಣ್ಣ ಗುಡಿಯ ಸಮೀಪದ ಜಾಗದಲ್ಲಿ ಪ್ರತಿಷ್ಠಾಪನೆಗೆ ತೀರ್ಮಾನಿಸಲಾಯಿತು. ಸಭೆ ಬಳಿಕ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲು ನಿಗದಿಪಡಿಸಿದ ಜಾಗದಲ್ಲಿ ಮುಖಂಡರು ಭೂಮಿ ಪೂಜೆಯನ್ನೂ ನೆರವೇರಿಸಿದರು