ಶಿರೂರು, ಜು ೨೫: ಪಟ್ಟಣದ ಖ್ಯಾತ ಗ್ರೀನ್ ವ್ಯಾಲಿ ವಸತಿ ಶಾಲೆ, ದೀನಾ ವಿಶೇಷ ಮಕ್ಕಳ ಶಾಲೆ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳ ಸ್ಥಾಪಕ-ಅಧ್ಯಕ್ಷರಾಗಿದ್ದ ಸೈಯದ್ ಅಬ್ದುಲ್ ಖಾದರ್ ಬಾಶು (೫೪) ರವರು ಮಂಗಳವಾರ, ಜು ೨೫ ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಇಬ್ಬರು ಗಂಡು, ಮೂವರು ಹೆಣ್ಣು, ಬಂಧು ಬಳಗ ಹಾಗೂ ಅಪಾರವಾದ ಅಭಿಮಾನಿಗಳನ್ನು ಅಗಲಿದ್ದು ಅತ್ಯಂತ ಅಕಸ್ಮಿಕವಾಗಿ ಎದುರಾದ ಈ ವಾರ್ತೆ ಶಿರೂರಿನ ಜನತೆಗೆ ದಿಗ್ಭ್ರಮೆ ಮೂಡಿಸಿದೆ.
1982ರಲ್ಲಿ ದುಬೈಗೆ ಆಗಮಿಸಿ ಉದ್ಯಮದಲ್ಲಿ ಭಾರೀ ಉನ್ನತಿ ಪಡೆದ ಬಾಶುರವರು ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದು ತಮ್ಮ ಹುಟ್ಟೂರಾದ ಶಿರೂರಿನಲ್ಲಿ ಗ್ರೀನ್ ವ್ಯಾಲಿ ವಸತಿ ಶಾಲೆಯನ್ನು ಸ್ಥಾಪಿಸಿ ಕರಾವಳಿಯ ತೀರದ ಪಟ್ಟಣಗಳಲ್ಲಿ ಸಿಬಿಎಸ್ ಸಿ ಸಿಲಬಸ್ ಇರುವ ಉತ್ತಮ ಶಿಕ್ಷಣ ಕ್ಷೇತ್ರ ಮೂಡಲು ಕಾರಣರಾಗಿದ್ದರು. ಶಿರೂರು ಅಸೋಸಿಯೇಶನ್ ಸಹಿತ ದುಬೈ ಹಾಗೂ ಶಿರೂರಿನಲ್ಲಿ ಹಲವಾರು ಸಂಘ ಸಂಸ್ಥೆಗಳಿಗೆ ಪೋಷಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೪ರಲ್ಲಿ ಅತ್ಯುತ್ತಮ ಎನ್ಆರ್ಐ ಉದ್ಯಮಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಶಿರೂರು ಅಸೋಸಿಯೇಶನ್ ಮೂಲಕ ಊರಿಗೆ ಹಲವಾರು ಸೌಕರ್ಯಗಳನ್ನು ಒದಗಿಸಿದ್ದು ಇದರಲ್ಲಿ ಊರಿಗೆ ಅಗತ್ಯವಿರುವ ಆಂಬ್ಯುಲೆನ್ಸ್ ವಾಹನ ಹಾಗೂ ಸೇತುವೆ ನಿರ್ಮಾಣ ಪ್ರಮುಖವಾಗಿವೆ.
ವಿಶೇಷ ಮಕ್ಕಳಿಗಾಗಿ ದೀನಾ ಸ್ಕೂಲ್ ಸ್ಥಾಪನೆ, ಮನೆಗಳೇ ಇಲ್ಲದ ವಿಶೇಷ ಮಕ್ಕಳ ಕುಟುಂಬಗಳಿಗೆ ಮನೆ ಕೊಡುಗೆ, ಶಿಥಿಲಾವಸ್ಥೆಯಲ್ಲಿದ್ದ ಮನೆಗಳ ನವೀಕರಣ, ವಿಶೇಷ ಮಕ್ಕಳ ಕುಟುಂಬಗಳಿಗೆ ಹಲವು ಸವಲತ್ತುಗಳನ್ನು ಜಾತಿ-ಧರ್ಮಗಳ ಭೇದವಿಲ್ಲದೆ ಸೈಯದ್ ಅಬ್ದುಲ್ ಖಾದರ್ ಬಾಶು ತಮ್ಮ ಸೈಯದ್ ಮೀರಾನ್ ಮೆಮೋರಿಯಲ್ ಟ್ರಸ್ಟ್ ಮೂಡಲ ಒದಗಿಸಿ ಹಲವು ಕುಟುಂಬಗಳ ಕಣ್ಣೀರು ಒರೆಸಿದವರಾಗಿದ್ದಾರೆ.
ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೈಯದ್ ಅಬ್ದುಲ್ ಖಾದರ್ ಬಾಶುರವರು ಸಂಕಷ್ಟದಲ್ಲಿರುವವರ ಪಾಲಿಗೆ ಆಪತ್ಬಾಂಧವರಾಗಿದ್ದರು. ಕೆಲ ದಿನಗಳ ಹಿಂದಷ್ಟೇ್ ಇವರ ಪುತ್ರಿಯ ವಿವಾಹವು ಮಂಗಳೂರಿನಲ್ಲಿ ನಡೆದಿತ್ತು. ಸೈಯದ್ ಅಬ್ದುಲ್ ಖಾದರ್ ಬಾಶು ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಂಗಳವಾರ ಶಿರೂರಿನ ಶಾಲೆ-ಕಾಲೇಜುಗಳು ಹಾಗೂ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಇಶಾ ನಮಾಝ್ ಬಳಿಕ ಮಂಗಳೂರಿನ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.