*ಎಂ.ಆರ್.ಮಾನ್ವಿ
ಭಟ್ಕಳ: ಕೊರೋನಾ ಮನುಷ್ಯನ ಯೋಚಿಸುವ ಹಾದಿಯನ್ನೇ ಬದಲಿಸಿ ಬಿಟ್ಟಿದೆ. ದೇಶಾದ್ಯಂತ ಅದು ಸೃಷ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಇದು ಒಂದೆಡೆ ಸಾವಿರಾರು ಜೀವಗಳನ್ನು ಬಲಿ ಪಡೆದುಕೊಂಡಿದ್ದರೆ ಮತ್ತೊಂದೆಡೆ ಲಕ್ಷಾಂತರ ಮಂದಿಯ ಉದ್ಯೋಗವನ್ನು ಕಸಿದುಕೊಂಡು ಅವರ ಬದುಕಿಗೆ ಅಡಕತ್ತರಿಯಾಗಿ ಮಾಡರ್ಪಟ್ಟಿದೆ. ಸಾವಿರಾರು ಕುಟುಂಬಗಳು ಅನ್ನಕಾಣದೆ ಬೀದಿಪಾಲಾಗುತ್ತಿವೆ. ಲಾಕ್ಡೌನ್ ಸಮಯದಲ್ಲಿ ಇದು ಸೃಷ್ಟಿಸಿದ್ದ ಸಮಸ್ಯೆಗಳು ಬೇರೆಯದ್ದಾಗಿರೆ ಅನ್ಲಾಕ್ ನಂತರ ಮತ್ತಷ್ಟು ಸಮಸ್ಯೆಗಳನ್ನು ಉಲ್ಭಣಿಸುವಂತೆ ಮಾಡಿದೆ.
ಉದ್ಯೋಗದಾತರೇ ಉದ್ಯೋಗಗಳನ್ನು ಕಂಡುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಉದ್ಯೋಗಿಗಳಂತೋ ಬದುಕಲು ಬವಣೆ ಪಾಡುತ್ತಿದ್ದಾರೆ. ದೇಶದಲ್ಲಿ ಅನ್ಲಾಕ್ ಘೋಷನೆಯಾದಂದಿನಿಂದ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು, ರಿಕ್ಷಾಚಾಲಕರು, ತರಕಾರಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಹೀಗೆ ಒಂದು ಹಂತಕ್ಕೆ ಬಂದು ನಿಂತುಕೊಂಡಿದ್ದಾರೆ. ಆದರೆ ಕೆಲ ವೃತ್ತಿಪರರು ಈಗ ಬೀದಿಗೆ ಸಂಪೂರ್ಣವಾಗಿ ಬೀದಿಗೆ ಬಂದಿದ್ದಾರೆ. ವಕೀಲರು, ಖಾಸಗಿ ಶಾಲಾ ಶಿಕ್ಷಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಿದ್ದರೂ ಅವರ ಹೊಟ್ಟೆಗೆ ಒಂದು ಹೊತ್ತಿನ ಗಂಜಿ ಸಿಗುತ್ತಿಲ್ಲ.
ಪ್ರತಿಯೋರ್ವರಿಗೂ ಕೂಡಾ ತಮ್ಮ ವೃತ್ತಿ ಗೌರವ ಮುಖ್ಯವಾಗುತ್ತದೆ. ಒಂದು ಕಾಲದಲ್ಲಿ ವೈಟ್ ಕಾಲರ್ ಜಾಬ್ ಮಾಡುವವರು ರೈತರನ್ನು ಕಂಡರೆ ನಿರ್ಲಕ್ಷ ಮಾಡುತ್ತಿದ್ದ ಕಾಲವಿತ್ತು. ಹಲವರು ತಾವು ರೈತನ ಮಗ ಎಂದು ಹೇಳಿಕೊಳ್ಳೂವುದಕ್ಕೂ ಕೂಡಾ ಹಿಂಜರಿಯುತ್ತಿದ್ದುದು ಈಗ ಇತಿಹಾಸ. ಇಂದು ರೈತನ ಮಗ ಎಂದರೆ ಅದುವೇ ಹೆಮ್ಮೆ ಎಂದು ಕೊಂಡವರೇ ಹೆಚ್ಚು. ಇದಕ್ಕೇ ಹೇಳುವುದು ಕಾಲಾಯ ತಸ್ಮೈ ನಮಃ.
ಕೆಲವರು ಸ್ವಲ್ಪ ಓದಿದರೆ ಸಾಕು ನಾನು ದೊಡ್ಡ ಅಧಿಕಾರಿಯಾಗಬೇಕು, ಸರಕಾರಿ ಇಲ್ಲವೇ ಬ್ಯಾಂಕ್ ಉದ್ಯೋಗಿಯಾಗಬೇಕು ವೈಟ್ ಕಾಲರ್ ಜಾಬ್ ಹಿಡಿದು ಎಲ್ಲರೆದುರು ಅಡ್ಡಾಡಬೇಕು ಎಂದು ಹಂಬಲಿಸುತ್ತಾರೆ. ತಮ್ಮ ಮನೆಯಲ್ಲಿ ಎಷ್ಟೇ ಕೃಷಿ ಜಮೀನಿದ್ದರೂ ಸಹ ಅತ್ತ ಕಡೆ ಮುಖ ಮಾಡಿದರೆ ನನ್ನ ಘನೆತೆಗೇನಾದರೂ ಕುಂದು ಬರಬಹುದು ಎಂದು ತಿಳಿದು ಕೊಳ್ಳುವವರೇ ಹೆಚ್ಚು. ಆದರೆ ಇಲ್ಲಿನ ಶಿರಾಲಿ ಮಾವಿನಕಟ್ಟೆಯ ನಿವಾಸಿ ಸದಾನಂದ ಜೆ. ನಾಯ್ಕ ಇವರು ಇದಕ್ಕೆ ವಿರುದ್ಧ. ತಾವು ಎಲ್.ಎಲ್.ಬಿ. ಪದವಿ ಮುಗಿಸಿ ವಕೀಲಿ ವೃತ್ತಿ ಮಾಡುತ್ತಿದ್ದರೂ ಸಹ ತಮ್ಮ ಮೂಲ ಕಸುಬು ಕೃಷಿಯನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷವೂ ಕೂಡಾ ತಮ್ಮ ಗದ್ದೆಗಳಲ್ಲಿ ಭತ್ತವನ್ನು ಭಿತ್ತಿ ಸಸಿಮಡಿಗಳನ್ನು ತಯಾರು ಮಾಡುವುದರಿಂದ ಹಿಡಿದು, ಗದ್ದೆ ನಾಟಿ, ಕಳೆ ನಿರ್ವಹಣೆ ಹಾಗೂ ಕಟಾವು ಮಾಡುವ ತನಕವೂ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇವರು ತಮ್ಮ ವಕೀಲಿ ವೃತ್ತಿಯನ್ನು ಕೂಡಾ ಶೃದ್ಧೆಯಿಂದ ಮಾಡುತ್ತಾ ಬಂದಿದ್ದಾರೆ.
ಈ ವರ್ಷ ಮಾತ್ರ ಕೊರೊನಾ ಲಾಕ್ಡೌನ್ನಿಂದಾಗಿ ಕೋರ್ಟ ಕಲಾಪಕ್ಕೆ ರಜೆ ಸಾರಿದ್ದರಿಂದ ಪೂರ್ಣಾವಧಿ ಕೃಷಿಕರಾಗಲು ಸಾಧ್ಯವಾಯಿತು. ಗದ್ದೆ ನಾಟಿ ಕಾರ್ಯ ಮುಗಿದು ಕಳೆ ನಿರ್ವಹಣೆ ಕೂಡಾ ಆಗಿದ್ದರೆ, ಇವರು ಹಾಲಿ ತಮ್ಮ ಮನೆಯ ಸುತ್ತಲೂ ಇರುವ ಜಾಗಾದಲ್ಲಿ ತರಕಾರಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿರುವ ಇವರಿಗೆ ಕೃಷಿ ಕಾರ್ಯ ಮಾತ್ರ ಅಚ್ಚುಮೆಚ್ಚು. ಕೃಷಿಯಲ್ಲಿ ಬ್ಯಾಂಕ್ ಉದ್ಯೋಗಿ ಇವರ ಸಹೋದರ ಕೂಡಾ ಸಹಕರಿಸುತ್ತಿದ್ದು ಇವರ ತಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಕೂಡಾ ಕೃಷಿಯಿಂದ ಇವರು ನಿವೃತ್ತರಾಗಿಲ್ಲ. ಇವರ ಕುಟುಂಬ ಸಂಪೂರ್ಣ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದು ಉತ್ತಮ ಕೃಷಿಕರಾಗಿದ್ದಾರೆ.
ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ವಿಶೇಷ ಆಸಕ್ತಿ ಇತ್ತು. ನಾನು ಕೃಷಿ ಕುಟುಂಬದಿಂದ ಬಂದವನು. ವೃತ್ತಿಯಲ್ಲಿ ವಕೀಲನಾದರೂ ನಾನು ಕೃಷಿಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಕೃಷಿಗೆ ನನ್ನದು ಮೊದಲ ಆದ್ಯತೆ. ಎಸ್.ಜೆ.ನಾಯ್ಕ, ವಕೀಲರು, ಭಟ್ಕಳ.