ಸಮೀವುಲ್ಲಾ ಮತ್ತು ಮಾರ್ಬಲ್ ಅನ್ಸರ್ ಅಪಹರಣಕ್ಕೊಳಗಾದ ಉದ್ಯಮಿಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸಮೀವುಲ್ಲಾ ಅವರು ಜೆಡಿಎಸ್ ಪಕ್ಷದ ಮುಖಂಡ ಹೆವನ್ ಹಬೀಬ್ ಅವರ ಅಳಿಯರಾಗಿದ್ದಾರೆ. ಟಿಪ್ಪುನಗರದ ಕುಖ್ಯಾತ ರೌಡಿ ಶೀಟರ್ ಜಮೀರ್ ಬಚ್ಚಾ ನೇತೃತ್ವದ ರೌಡಿ ತಂಡ ಅಪಹರಣ ನಡೆಸಿದ್ದೆಂದು ಹೇಳಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಇನ್ಸ್ಪೆಕ್ಟರ್ ಮಹಾಂತೇಶ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಘಟನೆ ಹಿನ್ನೆಲೆ: ಗುರುವಾರ ಸಂಜೆ ಆರೋಪಿಗಳು ಆಲ್ಕೋಳ ವೃತ್ತ ಸಮೀಪವಿರುವ ಸಮೀವುಲ್ಲಾರವರಿಗೆ ಸೇರಿದ ಗ್ರಾನೈಟ್ ಅಂಗಡಿಗೆ ಆಗಮಿಸಿದ್ದಾರೆ. ಈ ವೇಳೆ ಉದ್ಯಮಿ ಮಾರ್ಬಲ್ ಅನ್ಸರ್, ಓರ್ವ ಗಿರಾಕಿ ಸೇರಿದಂತೆ ನಾಲ್ವರು ಅಂಗಡಿಯಲ್ಲಿದ್ದರು. ಕಚೇರಿಯೊಳಗಿದ್ದ ಸಮೀವುಲ್ಲಾರನ್ನು ರಿವಾಲ್ವಾರ್ ಮೂಲಕ ಬೆದರಿಸಿದ್ದು, ತದನಂತರ ಸಮೀವುಲ್ಲಾ ಜೊತೆಗೆ ಮಾರ್ಬಲ್ ಅನ್ಸರ್ ಹಾಗೂ ಇತರೆ ಇಬ್ಬರನ್ನು ಕೂಡ ಆರೋಪಿಗಳು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ನಂತರ ವಿನೋಬನಗರ, ಗೋಪಾಳ ಸೇರಿದಂತೆ ವಿವಿಧೆಡೆ ಕಾರಿನಲ್ಲಿ ಆರೋಪಿಗಳು ಸುತ್ತಾಡಿದ್ದಾರೆ. ಸಮೀವುಲ್ಲಾರವರ ಮೊಬೈಲ್ನಲ್ಲಿಯೇ ಉದ್ಯಮಿ ಹೆವನ್ ಹಬೀಬ್ರನ್ನು ಆರೋಪಿಗಳು ಸಂಪರ್ಕಿಸಿದ್ದಾರೆ. 50 ಲಕ್ಷ ರೂ. ನೀಡದಿದ್ದರೆ ಸಮೀವುಲ್ಲಾರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ.
ಈ ನಡುವೆ ಕಿಡ್ನ್ಯಾಪ್ ವಿಷಯವು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರ ಶೋಧಕ್ಕೆ ಮುಂದಾಗಿದ್ದಾರೆ. ಈ ವೇಳೆ ಕಿಡ್ನ್ಯಾಪ್ರ್ಸ್ಗಳಿದ್ದ ಕಾರನ್ನು ಪತ್ತೆ ಹಚ್ಚಿದ ಪೊಲೀಸ್ ಪಿಸಿಆರ್ ವಾಹನವು ಅವರನ್ನು ಸೆರೆ ಹಿಡಿಯಲು ಮುಂದಾಗಿದೆ. ಈ ವೇಳೆ ಆರೋಪಿಗಳು ರಿವಾಲ್ವಾರ್ ಮೂಲಕ ಪೊಲೀಸರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಅಪಹರಿಸಿದವರೊಂದಿಗೆ ಆರೋಪಿಗಳು ಬೇರೊಂದು ಕಾರನ್ನೇರಿ ಮತ್ತೆ ನಗರದ ವಿವಿಧೆಡೆ ಸುತ್ತಾಡಿಸಿದ್ದಾರೆ. ಉದ್ಯಮಿಗಳ ಬಳಿಯಿದ್ದ 2 ಲಕ್ಷ ರೂ. ಪಡೆದುಕೊಂಡು ಅವರನ್ನು ರಾತ್ರಿ 10 ಗಂಟೆಯ ಸುಮಾರಿಗೆ ಜೈಲ್ ರಸ್ತೆಯ ಹಳೇ ಜೈಲ್ ಬಳಿ ಬಿಟ್ಟಿದೆ. ಅಲ್ಲಿಯೇ ನಿಲ್ಲಿಸಿದ್ದ ತಮ್ಮ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಆದರೆ ಮೂಲಗಳ ಪ್ರಕಾರ, ಆರೋಪಿಗಳು ಲಕ್ಷಾಂತರ ರೂ. ಒತ್ತೆ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಕುರಿತಂತೆ ಪೊಲೀಸರಿಗೆ ಏನಾದರೂ ದೂರು ನೀಡಿದರೆ ಕೊಲ್ಲುವುದಾಗಿಯೂ ಆರೋಪಿಗಳು ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಆತಂಕ: ಕಳೆದ ಕೆಲ ದಿನಗಳ ಹಿಂದಷ್ಟೆ ರೌಡಿ ತಂಡವೊಂದು, ಆರ್ಎಂಎಲ್ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೂ ಆದ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜಕಾರಣಿಯೋರ್ವರ ಮನೆಯ ಗೇಟ್ಗೆ ರಿವಾಲ್ವಾರ್ನಿಂದ ಗುಂಡು ಹಾರಿಸಿ ಬೆದರಿಸುವ ಕೆಲಸ ನಡೆಸಿತ್ತು ಎನ್ನಲಾಗಿದೆ. ಈ ಘಟನೆಯ ಬೆನ್ನಲ್ಲೆ, ಮತ್ತೊಂದು ರೌಡಿ ತಂಡವು ಗ್ರಾನೈಟ್ ಉದ್ಯಮಿಗಳನ್ನು ಅಪಹರಿಸಿ ಒತ್ತೆ ಹಣ ವಸೂಲಿ ಮಾಡಿ ಬಿಡುಗಡೆಗೊಳಿಸಿದ ಕೃತ್ಯವು ಉದ್ಯಮ ಲೋಕದಲ್ಲಿ ಆತಂಕ ಉಂಟು ಮಾಡಿದೆ.
ರೌಡಿಗಳ ಕೆಯಲ್ಲಿ ರಿವಾಲ್ವರ್
ನಗರದಲ್ಲಿ ಕಳೆದ ಸುಮಾರು ದಿನಗಳ ಹಿಂದೆ ಇಬ್ಬರು ಉದ್ಯಮಿಗಳಿಗೆ ಪ್ರತ್ಯೇಕ ರೌಡಿ ತಂಡಗಳು, ರಿವಾಲ್ವಾರ್ ಮೂಲಕ ಬೆದರಿಕೆ ಹಾಕಿದೆ. ಮತ್ತೊಂದೆಡೆ ಪಾತಕಿಗಳು ಕೆಲ ಉದ್ಯಮಿಗಳಿಗೆ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿರುವ ಮಾಹಿತಿಗಳು ಕೂಡ ಕೇಳಿಬರತೊಡಗಿದೆ. ರೌಡಿಗಳು ರಿವಾಲ್ವಾರ್ ಮೂಲಕ ರಾಜಾರೋಷವಾಗಿ ಉದ್ಯಮಿಗಳಿಗೆ ಬೆದರಿಕೆ ಹಾಕಿ, ಹಣ ಸುಲಿಗೆ ಹಾಗೂ ಬೆದರಿಕೆ ಹಾಕಲು ಮುಂದಾಗಿರುವುದು ಉದ್ಯಮ ವಲಯದಲ್ಲಿ ತಲ್ಲಣ ಉಂಟು ಮಾಡಿದೆ. ಸಾರ್ವಜನಿಕರಲ್ಲಿಯೂ ಸಾಕಷ್ಟು ಆತಂಕ ಉಂಟು ಮಾಡಿದೆ.