ಸರಳ, ತ್ವರಿತ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಜಿಲ್ಲಾಡಳಿತ ರೈತರೊಂದಿಗೆ ಸಮಾಲೋಚಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಿದ ಜಿಲ್ಲಾಧಿಕಾರಿ.
ಧಾರವಾಡ : ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು, ಕೈಗಾರಿಕೆ ವಸಾಹತುಗಳ ಸ್ಥಾಪನೆ ಮತ್ತಿತರ ಮಹತ್ವದ ಕೆಲಸಗಳ ಅನುಷ್ಠಾನದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಅತ್ಯಂತ ಪ್ರಮುಖವಾಗಿರುತ್ತದೆ. ಭೂಸ್ವಾಧೀನ ಪ್ರಕ್ರಿಯೆಗೆ ರೈತರ ಬಳಿ ಇರುವ ದಾಖಲೆಗಳ ಕ್ರೋಢೀಕರಣ ಮತ್ತು ಪರಿಹಾರ ಒದಗಿಸುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸಲು ಧಾರವಾಡ ಜಿಲ್ಲಾಡಳಿತ ಮುಂದಾಗಿದೆ.
ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಭೂ ದಾಖಲೆಗಳ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಹಾಗೂ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರು ಇಂದು ಇಟಿಗಟ್ಟಿ ಗ್ರಾಮಕ್ಕೆ ತೆರಳಿ ಇಟಿಗಟ್ಟಿ ಹಾಗೂ ಗಾಮನಗಟ್ಟಿ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆ ಪ್ರದೇಶಕ್ಕೆ ಅಗತ್ಯವಿರುವ ಸುಮಾರು 587 ಎಕರೆ ಭೂಮಿಯನ್ನು ರೈತರಿಂದ ಪಡೆಯುವ ಕಾರ್ಯವನ್ನು ಸರಳ ಮತ್ತು ತ್ವರಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಇಟಿಗಟ್ಟಿ ಗ್ರಾಮದಲ್ಲಿ 97 ರೈತರಿಗೆ ಸೇರಿದ ಸುಮಾರು 473 ಎಕರೆ ಜಮೀನನ್ನು ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಪ್ರತಿ ಎಕರೆಗೆ 55 ಲಕ್ಷ ರೂ.ಗಳಂತೆ ಈಗಾಗಲೇ 11 ಜನ ರೈತರಿಂದ 30 ಎಕರೆ 36 ಗುಂಟೆ ಜಮೀನು ಖರೀದಿಸಿ 14.51 ಕೋಟಿ ರೂ. ಪಾವತಿಸಲಾಗಿದೆ. ಗಾಮನಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿಯೂ ಸಹ 21 ರೈತರಿಗೆ ಸೇರಿದ 114 ಎಕರೆ 35 ಗುಂಟೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಇಂದು ನೇರವಾಗಿ ರೈತರ ಬಳಿ ತೆರಳಿದ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಂದ ಭೂಮಿಯ ದಾಖಲೆಗಳು, ಬ್ಯಾಂಕ್ ಖಾತೆ ಪುಸ್ತಕ, ನಷ್ಟಪೂರ್ತಿ ಕಾಗದ (Indemnity Bond), ಒಪ್ಪಂದ ದಾಖಲೆ (Agreement Bond), ಆಧಾರ್ ಕಾರ್ಡ್, ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದರು.
ಇಟಿಗಟ್ಟಿ ಗ್ರಾಮದಲ್ಲಿ ಮಂಗಳವಾರ ನಡೆದ ಈ ಕಾರ್ಯದಲ್ಲಿ ಎಲ್ಲಾ ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸಿದ ಏಳು ಜನ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ಬಿಡುಗಡೆಗೊಳಿಸಿ, ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಇನ್ನುಳಿದ ರೈತರಿಂದ ಕೆಲವು ದಾಖಲೆಗಳನ್ನು ತ್ವರಿತವಾಗಿ ಪಡೆದು ಪರಿಹಾರ ವರ್ಗಾವಣೆ ಮಾಡಲು ನಿರ್ದೇಶನ ನೀಡಿದರು. ಗಾಮನಗಟ್ಟಿ ಗ್ರಾಮದಲ್ಲಿಯೂ ಸಹ ಇದೇ ರೀತಿ ಕಾರ್ಯ ಕೈಗೊಂಡು ರೈತರಿಗೆ ತ್ವರಿತ ಪರಿಹಾರ ಒದಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.
ಗ್ರಾಮದ ರೈತರ ಪರವಾಗಿ ರವೀಂದ್ರ ದೇಸಾಯಿ ಮಾತನಾಡಿ, ಇಟಿಗಟ್ಟಿ ಗ್ರಾಮಸ್ಥರ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ, ರೈತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ತೊಂದರೆಯಾಗದ ರೀತಿಯಲ್ಲಿ ಒದಗಿಸುತ್ತಿರುವ ಕಾರ್ಯ ಅಭಿನಂದನೀಯವಾಗಿದೆ ಎಂದರು. ಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ತೋಟಗಾರಿಕೆ ಗಿಡ, ಕೊಳವೆ ಬಾವಿ,ದೊಡ್ಡ ಮರಗಳು,ಮನೆಗಳು ಇದ್ದರೆ ಅವುಗಳಿಗೆ ಪ್ರತ್ಯೇಕ ಬೆಲೆ ನಿರ್ಧರಿಸಿಕೊಡಬೇಕು ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ್, ವಿಶೇಷ ಭೂಸ್ವಾಧೀನಾಧಿಕಾರಿ ಶಾರದಾ ಕೋಲಕಾರ, ಜಂಟಿ ಕೈಗಾರಿಕಾ ನಿರ್ದೇಶಕ ದೊಡ್ಡಬಸವರಾಜ, ಧಾರವಾಡ ತಹಸೀಲ್ದಾರ ಡಾ.ಸಂತೋಷ ಬಿರಾದಾರ, ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಭೂದಾಖಲೆಗಳ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಇಟಿಗಟ್ಟಿ ಗ್ರಾಮದ ರೈತರು ಉಪಸ್ಥಿತರಿದ್ದರು.