ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರಾ ಮಹೋತ್ಸವ: ಶೇಡಿ ಮರ ಏರುವ ಭಕ್ತರು
ಭಟ್ಕಳ: ಎರಡು ದಿನಗಳ ಕಾಲ ನಡೆಯಲಿರುವ ತಾಲೂಕಿನ ಹೆಬಳೆ ಶೇಡಬರಿ ಜಟಕಾ ಮಹಾಸತಿ ದೇವಿ ಜಾತ್ರೆಯು ಮಕರ ಸಂಕ್ರಾಂತಿ ದಿನದಂದು ವಿಧ್ಯುಕ್ತವಾಗಿ ಆರಂಭವಾಯಿತು.
ಜಾತ್ರೆಯ ಅಂಗವಾಗಿ ಭಕ್ತರು ಶೆಡಬರಿ ಜಟಕಾ ಮಹಾಸತಿ ದೇವಿಗೆ ಹಾಗೂ ಪರಿವಾರ ದೇವರಿಗೆ ಸಿಂಗಾರದ ಹೂವಿನ ವಿಶೇಷಪೂಜೆ, ಕಾಣಿಕೆಗಳನ್ನು ಸಲ್ಲಿಸಿದರು. ಭಕ್ತರು ಶೇಡಿ ಮರವನ್ನು ಏರುವ ಹರಕೆ ಈ ಜಾತ್ರೆಯ ವಿಶೇಷತೆಯಾಗಿದೆ.
ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹರಕೆ ಮಾಡಿಕೊಂಡರೆ, ಕಷ್ಟಗಳಿಗೆ ಪರಿಹಾರ ಸಿಕ್ಕು ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಆದ್ದರಿಂದ ಭಕ್ತರು ಸಾಗರೋಪಾದಿಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಶೇಡಿಮರ ಏರುವ ಹರಕೆ ಹೊತ್ತವರು ದೇವರಿಗೆ ಪೂಜೆ ಸಲ್ಲಿಸಿ, ಶೇಡಿಮರ ಏರಿ ಮೂರು ಸುತ್ತು ತಿರುಗುತ್ತಾರೆ. ಬಳಿಕ ಅವರು ತಂದಿದ್ದ ಹೂವು, ಹಣ್ಣನ್ನು ಕೆಳಗಡೆ ನಿಂತಿರುವ ಭಕ್ತರ ಮೇಲೆ ಎಸೆಯುತ್ತಾರೆ. ಇದು ದೇವರ ಪ್ರಸಾದ ಎಂದು ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ಈ ಹರಕೆ ದೃಶ್ಯ ನೋಡಲೆಂದೇ ಜನ ಬರುತ್ತಾರೆ.
ದೇವಸ್ಥಾನದ ಆಡಳಿತ ಮಂಡಳಿಯಿಂದ ಎರಡು ದಿನಗಳ ಕಾಲ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ