ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಶನಿವಾರ ನಿಧನರಾಗಿದ್ದಾರೆ. ಅಸ್ವಸ್ಥತೆ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೇಟ್ಲಿ ಅವರನ್ನು ಆಗಸ್ಟ್ 9ರಂದು ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಕೇಂದ್ರ(ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ವಿತ್ತ ಹಾಗೂ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಜೇಟ್ಲಿ 1991ರಿಂದಲೇ ಬಿಜೆಪಿಯ ರಾಷ್ಟ್ರೀಯ ನಾಯಕರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು.
ಅನಾರೋಗ್ಯದ ಕಾರಣದಿಂದಾಗಿ ಜೇಟ್ಲಿ, ಎರಡನೆ ಅವಧಿಯ ಮೋದಿ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ನಿರಾಕರಿಸಿದ್ದರು. 2018ರಲ್ಲಿ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಜೇಟ್ಲಿ ತನ್ನನ್ನು ಬಾಧಿಸಿದ್ದ ಮಧ್ವಸ್ತಿ (ಸಾಫ್ಟ್ಟಿಶ್ಯೂ)ಯ ಕ್ಯಾನ್ಸರ್ ಕಾಯಿಲೆಗಾಗಿ ಈ ವರ್ಷದ ಜನವರಿಯಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ದರು.
ದೀರ್ಘ ಸಮಯದಿಂದ ಮಧುಮೇಹದಿಂದ ಬಳಲುತ್ತಿದ್ದುದರಿಂದ ಜೇಟ್ಲಿ ಅವರನ್ನು ಬೊಜ್ಜಿನ ಸಮಸ್ಯೆ ಕೂಡಾ ಕಾಡಿತ್ತು. ಇದಕ್ಕಾಗಿ ಅವರು 2014ರಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ (ಬೆರಿಯಾಟ್ರಿಕ್ ಸರ್ಜರಿ)ಗೆ ಒಳಗಾಗಿದ್ದರು. ಈ ಅವಧಿಯಲ್ಲಿ ಆಗ ರೈಲ್ವೆ ಸಚಿವರಾಗಿದ್ದ ಪಿಯೂಶ್ ಗೋಯಲ್, ವಿತ್ತ ಖಾತೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಂಡಿದ್ದರು.