ಕಾರವಾರ: ಬಿಡಾಡಿ ದನಕರುಗಳ ಮಾಲಿಕರಿಗೆ ಸ್ಥಳಿಯ ಸಂಸ್ಥೆಗಳು ನೋಟಿಸು ನೀಡಬೇಕು ಮತ್ತು ಒಂದು ವಾರದೊಳಗೆ ಮಾಲಿಕರು ದನಕರುಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳದಿದ್ದಲ್ಲಿ ಅಂತಹ ಬಿಡಾಡಿ ದನಕರುಗಳನ್ನು ಗೊಶಾಲೆಗೆ ಸೇರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾಣಿ ದಯಾ ಸಂಘ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಿಡಾಡಿ ದನಕರು ಮತ್ತು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿವೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಹಿನ್ನಲೆಯಲ್ಲಿ ಆಯಾ ಸ್ಥಳಿಯ ಸಂಸ್ಥೆಗಳು ಬಿಡಾಡಿ ದನಕರುಗಳನ್ನು ಗೊಶಾಲೆಗೆ ಸೇರಿಸಬೇಕು ಮತ್ತು ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶ ಟೆಂಡರ್ ಕರೆದು ಏಜನ್ಸಿಗಳ ಮೂಲಕ ಸಂತಾನಹರಣ ಮಾಡಬೇಕೆಂಬ ಸಲಹೆ ಸೂಚಿಸಿದರು.
ಅನಧಿಕೃತವಾಗಿ ಜಾನುವಾರುಗಳನ್ನು ಸಾಗಾಟ ಮಾಡುವಾಗ ಪೊಲೀಸ್ ಇಲಾಖೆ ವಶಪಡಿಸಿಕೊಂಡಂತಹ ಜಾನುವಾರುಗಳನ್ನು ಸಹ ಗೊಶಾಲೆಗೆ ಸೇರಿಸಬೇಕು. ಪೊಲೀಸ್ ಠಾಣೆಗಳು ಜಿಲ್ಲೆಯಲ್ಲಿರುವ ಗೊಶಾಲೆಗಳ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡು, ಸಂದರ್ಭನುಸಾರ ಸ್ಥಳಿಯ ಗೊಶಾಲೆಯನ್ನು ಸಂಪರ್ಕಿಸಬೇಕು. ನೋಂದಣಿಯಾಗಿರುವ ವಿವಿಧ ಟ್ರಸ್ಟ್ಗಳು ನಡೆಸುತ್ತಿರುವ ಗೊಶಾಲೆಗಳಿಗೆ ಸರಕಾರದ ಅನುದಾನದ ನೆರವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಸರಕಾರಿ ಇಲಾಖೆಗಳು ಬೇಡಿಕೆ ಸಲ್ಲಿಸಿದಾಗ ಟ್ರಸ್ಟ್ಗಳು ಜಾನುವಾರುಗಳನ್ನು ಸ್ವೀಕರಿಸಿ ನಿರ್ವಹಿಸುವ ಕಾರ್ಯಮಾಡಬೇಕೆಂದರು.
ಸಭೆಯಲ್ಲಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಸುಭ್ರಾಂiÀi ಭಟ್, ಡಿವೈಎಸ್ಪಿ ಶಂಕರ ಮಾರಿಹಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪವಾರ್ ಉಪಸ್ಥಿತರಿದ್ದರು.
ಜುಲೈ 17 ರಿಂದ ಗ್ರಾಮ ಸಭೆ
ಕಾರವಾರ: ಮೊದಲನೆ ಹಂತದ ಕಾರವಾರ ತಾಲೂಕಿನ ಗ್ರಾಮ ಪಂಚಾಯತ್ಗಳ ಗ್ರಾಮ ಸಭೆಯನ್ನು ಜುಲೈ 17 ರಿಂದ ಅಗಷ್ಟ್ 8 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರವಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 17 ರಂದು ಬೆಳಗ್ಗೆ 11 ಗಂಟೆಗೆ ಹಣಕೋಣ, 18 ಕಡವಾಡ, 19 ವೈಲವಾಡಾ, 20 ಕೆರವಡಿ, 22 ಕಿನ್ನರ, 23 ಮಾಜಾಳಿ, 24 ತೋಡುರ, 25 ಮಲ್ಲಾಪುರ 26 ಚಿತ್ತಾಕುಲಾ, 29 ಮುಡಗೇರಿ, 30 ಅಮದಳ್ಳಿ, 31 ಗೋಟೆಗಾಳಿ, ಅಗಷ್ಟ್ 1 ರಂದು ಅಸ್ನೋಟಿ, 2 ಶಿರವಾಡ, 3 ಘಾಡಾಸಾಯಿ, 6 ಚೆಂಡಿಯಾ, 7 ಕದ್ರಾ, 8 ರಂದು ದೇವಳಮಕ್ಕಿಯಲ್ಲಿ ಗ್ರಾಮ ಸಭೆ ನಡೆಯಲಿವೆ.