ಮೂಡಬಿದ್ರೆ : ಮುಡಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೋಕಟ್ಟೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮುಂದಿನ ಅವಧಿಗೆ SDPI ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮವು ಜೋಕಟ್ಟೆಯ ಬೈತುಲ್ ಹುದಾ ಗಾರ್ಡನ್ ನಲ್ಲಿ SDPI ಕ್ಷೇತ್ರ ಸಮಿತಿ ಅಧ್ಯಕ್ಷ ಆಷಿಫ್ ಕೋಟೆಬಾಗಿಲು ಅಧ್ಯಕ್ಷತೆಯಲ್ಲಿ ನಡೆಯಿತು.
ಜೋಕಟ್ಟೆ ಗ್ರಾಮದ ಎಲ್ಲಾ 19 ಸ್ಥಾನಗಳಿಗೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದ್ದು ಸೋಮವಾರ ಪ್ರಥಮ ಹಂತದಲ್ಲಿ 6 ಅಭ್ಯರ್ಥಿಗಳ ಹೆಸರನ್ನುಮಾತ್ರ ಘೋಷಿಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಮಾತನಾಡಿ, ಇತಿಹಾಸ ಹೊಂದಿರುವ ಪಕ್ಷದ ಸರ್ವಾಧಿಕಾರಿ ಧೋರಣೆ ವಿರುದ್ಧ ಸೆಟೆದು ನಿಲ್ಲಬೇಕು, ಜನರ ಮತ ಪಡೆದು ಜನೋಪಯೋಗಿ ಕೆಲಸಮಾಡುವುದು ಬಿಟ್ಟು MRPL ನಂತಹ ಕಂಪನಿಗಳ ಚಾಕರಿ ಮಾಡಿದ, ಕಮಿಷನ್ ದಂಧೆ ನಡೆಸಿದ ಜನಪ್ರತಿನಿಧಿ-ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಕಾಲ ಕೂಡಿಬಂದಿದೆ. ಅವಕಾಶದಿಂದ ವಂಚಿತರಾಗದೆ ಜನರ ನಡುವೆ-ಜನರ ಸಮಸ್ಯೆಗೆ ಸ್ಪಂದಿಸುವ ಎಸ್ಡಿಪಿಐ ಪಕ್ಷಕ್ಕೆ ಮತ ನೀಡಿ ಈ ಗ್ರಾಮದ ಸರ್ವ ಏಳಿಗೆಗೆ ಅವಕಾಶ ನೀಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ನಿಸಾರ್ ಮಳವೂರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಶೇಕುಂಙ, ಹಾಜಿ ಅಹ್ಮದ್ ಬಾವ, ಹಾಜಿ ಮಾಸಿತ ಹುಸೈನ್, ಅಬ್ದುಲ್ ರಹಮಾನ್ ನಿರ್ಪರಿ, ಹೈದರ್ ಜಮಾತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೋಕಟ್ಟೆ ಚುನಾವಣಾ ಉಸ್ತುವಾರಿ ಜಮಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರೆ ಸಾಹಿಲ್ ಅಬೂಬಕ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.