ಮಂಗಳೂರು ಬಾಂಬ್ ಪ್ರಕರಣದ ತನಿಖೆಗೆ ಎಸ್ಡಿಪಿಐ ಆಗ್ರಹ
ಭಟ್ಕಳ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಪ್ರಕರಣದ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಭಟ್ಕಳ ಘಟಕದ ಸದಸ್ಯರು ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಮರುಕ್ಷಣವೇ ಗೋಲಿಬಾರ್ ವಿರುದ್ಧ ಪ್ರತಿಕಾರ, ಇಸ್ಲಾಂ ರಾಷ್ಟ್ರದ ನಿರ್ಮಾಣ, ಜಿಹಾದಿ ಉಗ್ರರು ಎಂದೆಲ್ಲ ಕಪೋಲಕಲ್ಪಿತ ವರ್ಣರಂಜಿತ ಕಥೆಗಳನ್ನು ಬಿತ್ತರಿಸಿ ಅಲ್ಪಸಂಖ್ಯಾತ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಗರಿಷ್ಠ ಪ್ರಯತ್ನ ನಡೆಯಿತು. ಆರೋಪಿ ಮುಸ್ಲೀಮ್ನಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಆತನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ಆಡಳಿತ ವರ್ಗ ಪ್ರಯತ್ನ ನಡೆಸುತ್ತಿದೆ. ಮಾತ್ರವಲ್ಲ, ಬಾಂಬ್ ಇಟ್ಟಂತಹ ದೇಶದ್ರೋಹ ಪ್ರಕರಣವನ್ನು ಪಟಾಕಿ ಪ್ರಕರಣವನ್ನಾಗಿ ಬದಲಾಯಿಸಲಾಗಿದೆ. ಸರಕಾರ, ವ್ಯವಸ್ಥೆ ಮಂಗಳೂರು ಬಾಂಬ್ ಪ್ರಕರಣದಲ್ಲಿ ದ್ವಂದ್ವ ನಿಲುವನ್ನು ತಾಳಿರುವುದು ಸಮಾಜದ ಸ್ವಾಸ್ಥ್ಯವನ್ನು ಕದಡುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಿಲ ಸಮೀಪದ ಆರ್ಲಪದವು ಎಂಬಲ್ಲಿ ಸ್ಪೋಟಕ ವಸ್ತುಗಳನ್ನು ತಯಾರಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು ಆ ಬಗ್ಗೆ ಸರಿಯಾಗಿ ತನಿಖೆ ನಡೆದಿಲ್ಲ. ಈ ಹಿಂದೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಾಗಲೂ ಆರೋಪಿ ಮಾನಸಿಕ ಅಸ್ವಸ್ಥನೆಂದು ಹೇಳಿ ಪ್ರಕರಣವನ್ನೇ ಗಾಳಿಗೆ ತೂರಲಾಗಿದೆ. ಪ್ರಕರಣದ ಆರೋಪಿಯು ಮುಸ್ಲಿಮೇತರನಾದರೆ ಆತನಿಗೆ ಮಾನಸಿಕ ಅಸ್ವಸ್ಥ ಪಟ್ಟ ನೀಡಿ ಆತನನ್ನು ಆರೋಪ ಮುಕ್ತಗೊಳಿಸುವ ಪದ್ಧತಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ ಗೋಲಿಬಾರ್ ಘಟನೆಯನ್ನು ಮರೆಮಾಚುವ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸಲು ಅಧಿಕಾರಿ ವರ್ಗ ಹೂಡಿರುವ ನಾಟಕ ಎಂಬ ಸಂಶಯ ನಮಗೆ ಬರುತ್ತದೆ. ಈ ಷಡ್ಯಂತ್ರಗಳನ್ನು ಬಯಲಿಗೆಳೆಯಲು ಹಾಲಿ ಅಥವಾ ಮಾಜಿ ನ್ಯಾಯಾಧೀಶ ನೇತೃತ್ವದಲ್ಲಿ ವಿಚಾರಣೆ ನಡೆಸಬೇಕು. ತನಿಖೆಯ ಮೊದಲೇ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿರುವ ಗೃಹ ಸಚಿವ ಎಸ್.ಆರ್.ಬೊಮ್ಮಾಯಿ ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ ಮನವಿಯನ್ನು ಸ್ವೀಕರಿಸಿದರು. ಎಸ್ಡಿಪಿಐ ಜಿಲ್ಲಾಧ್ಯಾಕ್ಷ ತೌಫಿಕ್ ಬ್ಯಾರಿ, ವಾಸೀಮ್ ಮನೇಗಾರ್ ಮೊದಲಾದವರು ಉಪಸ್ಥಿತರಿದ್ದರು.