ಭಟ್ಕಳ: ಶಿರಸಿಯ ಸಿಪಿಐ ಗಿರೀಶ ಎಸ್ಡಿಪಿಐ ವಿರುದ್ಧ ಪೂರ್ವಾಗೃಹ ಪೀಡಿತರಾಗಿ ವರ್ತಿಸುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ಡಿಪಿಐ)ದ ಜಿಲ್ಲಾ ಅಧ್ಯಕ್ಷ ತೌಫಿಕ್ ಬ್ಯಾರಿ ಆರೋಪಿಸಿದ್ದಾರೆ.
ಅವರು ಮಂಗಳವಾರ ಭಟ್ಕಳದಲ್ಲಿರುವ ಎಸ್ಡಿಪಿಐ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿರಸಿಯ ಯುವಕ ಮುಸನ್ನಿಫ್ ಎಂಬಾತ ತನ್ನ ಗೆಳೆಯನ ವಾಹನದ ಇನ್ಶೂರೆನ್ಸ್ ಪ್ರತಿಯನ್ನು ಹಾಜರುಪಡಿಸಲು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ, ಆತನನ್ನು ತನ್ನ ಕೋಣೆಗೆ ಕರೆದು ಆತನ ಮೊಬೈಲ್ನ್ನು ಪಡೆದುಕೊಂಡು ಅದರಲ್ಲಿದ್ದ ಎಸ್ಡಿಪಿಐ ಕಾರ್ಯಕ್ರಮಗಳ ಪೋಟೋ ನೋಡಿದ್ದಾರೆ. `ಇನ್ನೂ ನೀನು ಎಸ್ಡಿಪಿಐನಲ್ಲಿದ್ದೀಯಾ, ಶಿರಸಿಯಲ್ಲಿ ಎಸ್ಡಿಪಿಐನ್ನು ನಡೆಸಲು ನಾನು ಬಿಡುತ್ತೇನೆ ಎಂದುಕೊಂಡಿದ್ದೀಯಾ ಎಂದು ಬೆದರಿಸಿದ್ದಲ್ಲದೇ, ಇಬ್ಬರು ಪೊಲೀಸ್ ಪೇದೆಗಳನ್ನು ಸೇರಿಸಿಕೊಂಡು ದೈಹಿಕವಾಗಿಯೂ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಅಲ್ಲಿಂದ ಮಾರುಕಟ್ಟೆ ಪೊಲೀಸ್ ಠಾಣೆಗೆ ಕಳುಹಿಸಿ ಸಾಯಂಕಾಲದವರೆಗೆ ಇರಿಸಿಕೊಳ್ಳಲಾಗಿದೆ. ಅಲ್ಲದೇ ಮುಸನ್ನಿಫ್ ವಿರುದ್ಧ ಐಪಿಸಿ ಸೆಕ್ಷನ್ 110ನ್ನು ಸಹ ದಾಖಲಿಸಲಾಗಿದೆ. ಸದರಿ ಮುಸನ್ನಿಫ್ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಪೊಲೀಸ್ ದೌರ್ಜನ್ಯದಿಂದ ಇನ್ನಷ್ಟು ಘಾಸಿಗೊಂಡು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಪಿಐ ಗಿರೀಶ ಈ ಹಿಂದೆಯೂ ಇಂತಹುದ್ದೇ ವರ್ತನೆ ತೋರಿದ್ದಾರೆ. ಈ ಕೂಡಲೇ ಅವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿದರು. ಎಸ್ಡಿಪಿಐ ಭಟ್ಕಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ವಾಸೀಮ್, ಜಲಾಲುದ್ದೀನ್ ಉಪಸ್ಥಿತರಿದ್ದರು.