ಹೊಸದಿಲ್ಲಿ: ಕೇರಳದ ಮೀನುಗಾರರ ಹತ್ಯೆ ಇಟಲಿ ನಾವಿಕರ ವಿರುದ್ಧದ ಮೊಕದಮೆ ರದುಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕೇರಳ ಕರಾವಳಿಯಲ್ಲಿ 2012ರಲ್ಲಿ ನಡೆದ ಇಬ್ಬರು ಭಾರತೀಯ ಮೀನುಗಾರರ ಹತ್ಯೆಗೆ ಸಂಬಂಧಿಸಿ ಇಟಲಿ ನೌಕಾ ಪಡೆಯ ಇಬ್ಬರು ನಾವಿಕರ ವಿರುದ್ಧ ಭಾರತದಲ್ಲಿ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ರಜಾಕಾಲದ ಪೀಠ ಇಟಲಿ ನೌಕಾ ಪಡೆಯ ಇಬ್ಬರು ನಾವಿಕರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ವಜಾಗೊಳಿಸಿ, ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.
“ನ್ಯಾಯಾಲಯದ ನಿರ್ದೇಶನದಂತೆ ಇಟಲಿ ಸರಕಾರ ಈಗಾಗಲೇ ಮೀನುಗಾರರ ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ಪಾವತಿಸಿದೆ. ಇಟಲಿ ಸರಕಾರ ನೀಡಿದೆ ಪರಿಹಾರದ ಬಗ್ಗೆ ನಾವು ಸಂತುಷ್ಟರಾಗಿದ್ದೇವೆ. ಆದುದರಿಂದ ಈ ಪ್ರಕರಣವನ್ನು ರದ್ದುಗೊಳಿಸುವುದು ಸೂಕ್ತವಾಗಿದೆ'' ಎಂದು ಪೀಠ ಹೇಳಿತು.
10 ಕೋಟಿ ರೂಪಾಯಿ ಪರಿಹಾರವನ್ನು ಕೇರಳ ಹೈಕೋರ್ಟ್ಗೆ ವರ್ಗಾಯಿಸಲಾಗುವುದು. ಈ 10 ಕೋಟಿ ರೂಪಾಯಿಯಲ್ಲಿ ತಲಾ 4 ಕೋಟಿ ರೂಪಾಯಿಯನ್ನು ಮೃತ ಮೀನುಗಾರರ ಕುಟುಂಬದವರ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಗುತ್ತದೆ. ಉಳಿದ 2 ಕೋಟಿ ರೂಪಾಯಿಯನ್ನು ದೋಣಿಯ ಮಾಲಕರಿಗೆ ನೀಡಲು ನಿರ್ಧರಿಸಲಾಗಿದೆ.
2012 ಫೆಬ್ರವರಿ 15ರಂದು ಲಕ್ಷದ್ವೀಪದ ಕಡೆಯಿಂದ ಮೀನುಗಾರಿಕೆ ಮುಗಿಸಿಕೊಂಡು ಮರಳುತ್ತಿದ್ದ ಕೇರಳ ಮೀನುಗಾರರನ್ನು ಇಟಲಿಯ ನೌಕಾ ಪಡೆಯ ನಾವಿಕರು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಆನಂತರ ನಾವಿಕರು, “ಸಮುದ್ರದ ಅಂತರ್ರಾಷ್ಟ್ರೀಯ ಭಾಗದಲ್ಲಿ ಅವರು ಇದ್ದಾರೆಂದು ನಾವು ನಂಬಿದ್ದೆವು ಹಾಗೂ ಅವರು ಕಡಲ್ಗಳ್ಳರು ಎಂದು ನಾವು ತಪ್ಪಾಗಿ ಭಾವಿಸಿದ್ದೆವು'' ಎಂದು ಪ್ರತಿಪಾದಿಸಿದ್ದರು. ಈ ಘಟನೆಗೆ ಸಂಬಂಧಿಸಿ ಇಬ್ಬರು ನಾವಿಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.