ಭಟ್ಕಳದಲ್ಲಿ ನಡೆದ ಸಕ್ಸಂ ಸೈಕ್ಲೋಥ್ಯಾನ್ ಸೈಕಲ್ ರ್ಯಾಲಿ
ಭಟ್ಕಳ: ರಂಜನ್ ಇಂಡೇನ್, ರಫಾತ್ ಏಜೆನ್ಸಿ ಮತ್ತು ಗಾಡ್ವಿನ್ ಸೈಕಲ್ ಟ್ರೇಡಿಂಗ್ ಕಂಪನಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇಂಧನ ಬಳಕೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಸಕ್ಸಂ ಸೈಕ್ಲೋಥ್ಯಾನ್ ಬೃಹತ್ ಸೈಕಲ್ ಜಾಥಾ ಯಶಸ್ವಿಯಾಗಿ ನಡೆಯಿತು.
ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಸೈಕಲ್ ಜಾಥಾವನ್ನು ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂಧನ ಮತ್ತು ಪರಿಸರ ಸಂರಕ್ಷಣೆ, ಪೆಟ್ರೋಲಿಯಮ್ ಉತ್ಪನ್ನಗಳ ಸದ್ಭಳಕೆಯ ಬಗ್ಗೆ ಸಂದೇಶ ನೀಡಲು ಈ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಭಟ್ಕಳ ಪೊಲೀಸ್ ವೃತ್ತ ನಿರೀಕ್ಷಕ ಕೆ.ಎಲ್.ಗಣೇಶ ಸೈಕಲ್ ಜಾಥಾಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಭಟ್ಕಳ ಶಹರ ಠಾಣಾ ಎಸೈ ಕುಸುಮಾಧರ ಉಪಸ್ಥಿತರಿದ್ದರು. ಭಟ್ಕಳ ಪೊಲೀಸ್ ಪರೇಡ್ ಮೈದಾನದಿಂದ ಹೊರಟ ಸೈಕಲ್ ರ್ಯಾಲಿಯು ಸಂಶುದ್ದೀನ್ ಸರ್ಕಲ್, ಹನೀಫಾಬಾದ್ ರಸ್ತೆ, ತಾಲೂಕು ಕ್ರೀಡಾಂಗಣ, ಜಾಲಿ ರಸ್ತೆ ಮಾರ್ಗವಾಗಿ ಪುನಃ ಪೊಲೀಸ್ ಪರೇಡ್ ಮೈದಾನವನ್ನು ತಲುಪಿ ಅಂತ್ಯವಾಯಿತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ನಂತರ ನಡೆದ ಲಕ್ಕಿ ಡ್ರಾನಲ್ಲಿ ಬೆಳಕೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶಶಾಂಕ ನಾಯ್ಕ ಸೈಕಲ್ನ್ನು ಪಡೆದುಕೊಂಡರು. ರಫಾತ್ ಏಜೆನ್ಶಿಯ ನದೀಖ್ ಉಪಸ್ಥಿತರಿದ್ದರು.