ಕಾರವಾರ: ತಾಲ್ಲೂಕಿನ ಕಿನ್ನರದಿಂದ ಸಿದ್ದರ ತಲುಪುವ ರಸ್ತೆಗೆ ಚರಂಡಿ ನಿರ್ಮಿಸಿ, ತಿರುವುಗಳನ್ನು ಸರಿಪಡಿಸುವ ಕಾಮಗಾರಿಗೆ ಶಾಸಕಿ ರೂಪಾಲಿ ನಾಯ್ಕ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಕಿನ್ನರದಿಂದ ಸಿದ್ಧರ ತಲುಪುವ ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೇಲೆಯೇ ಹರಿದು ರಸ್ತೆಗಳು ಹಾಳಾಗುತ್ತಿದ್ದವು. ಅಲ್ಲದೆ, ಅಕ್ಕಪಕ್ಕದ ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಶಾಸಕರಿಗೆ ಅರ್ಜಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಶಾಸಕರು, 1 ಕೋಟಿ ರೂ.ಯ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಅದರಂತೆ, ತಾಲ್ಲೂಕಿನ ಹಳೆಕೋಟ ಗ್ರಾಮದಲ್ಲಿ ಹಾದು ಹೋಗುವ ಕೈಗಾ- ಇಳಕಲ್ ರಾಜ್ಯ ಹೆದ್ದಾರಿಯು ಈ ಭಾಗದಲ್ಲಿ ಕಿರಿದಾಗಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸಿ ಪ್ರಾಣ ಹಾನಿ ಉಂಟಾಗುತ್ತಿತ್ತು. ಈ ರಸ್ತೆಯ ಅಗಲೀಕರಣ ಹಾಗೂ ಸುಧಾರಣೆ ಮಾಡಿಕೊಡುವಂತೆ ಹಳೆಕೋಟ ಗ್ರಾಮಸ್ಥರು ಶಾಸಕರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅಂತೆಯೇ ಹಳೆಕೋಟ ಗ್ರಾಮದ ಕೈಗಾ- ಇಳಕಲ್ ರಾಜ್ಯ ಹೆದ್ದಾರಿ ಅಗಲೀಕರಣ ಮತ್ತು ಸುಧಾರಣೆಯ 90 ಲಕ್ಷ ರೂ.ಗಳ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಬಿಜೆಪಿ ಗ್ರಾಮೀಣಾಧ್ಯಕ್ಷ ಸುಭಾಷ ಗುನಗಿ, ಜಿಲ್ಲಾ ವಕ್ತಾರ ರಾಜೇಶ ನಾಯಕ, ಪ್ರಮುಖರಾದ ಮನೋಜ ಭಟ್, ರಾಜೇಶ ನಾಯ್ಕ ಸಿದ್ದರ, ವಿನಾಯಕ ದುದಾಳಕರ, ಕಿಶನ್ ಕಾಂಬ್ಳೆ, ಆಶಾ ನಾಯ್ಕ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.