ಭಟ್ಕಳ: ಅತ್ಯುನ್ನತ ಗ್ರಾಹಕ ಸೇವೆಯಿಂದ ಪ್ರಚಲಿತಗೊಂಡ ರಾಜ್ಯದ ಪ್ರತಿಷ್ಠಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ 55ನೇ ವಾರ್ಷಿಕ ಸರ್ವಸಾಧಾರಣಾ ಸಭೆಯು ಶನಿವಾರ ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯ ಕಮಲಾವತಿ ರಾಮನಾಥ ಸಭಾ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ, ಬ್ಯಾಂಕಿನ ಪ್ರಗತಿಯ ವರದಿಯನ್ನು ಸದಸ್ಯರ ಮುಂದಿಡುತ್ತಾ ಮಾರ್ಚ 2019 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ.5 ಕೋಟಿ 7 ಲಕ್ಷ ನಿರ್ವಹಣಾ ಲಾಭ ಗಳಿಸಿದೆ. ರೂ.1 ಕೋಟಿ 47 ಲಕ್ಷ ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು ರೂ.3 ಕೋಟಿ 61 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. 2018-19ನೇ ಸಾಲಿನಲ್ಲಿ ಬ್ಯಾಂಕಿನ ಷೇರು ಬಂಡವಾಳವು ರೂ.13 ಕೋಟಿ 81 ಲಕ್ಷ ಇದ್ದು, ಸದಸ್ಯರ ಸಂಖ್ಯೆಯು 25183 ರಷ್ಟಾಗಿದೆ. ಬ್ಯಾಂಕಿನ ಠೇವಣಿ ಸಂಗ್ರಹವು ರೂ. 464 ಕೋಟಿ ತಲುಪಿದ್ದು, ಸಾಲ ಮುಂಗಡವು ರೂ.240 ಕೋಟಿ ಯಷ್ಟಾಗಿದೆ. ಬ್ಯಾಂಕಿನ ಒಟ್ಟೂ ಅನುತ್ಪಾದಕ ಆಸ್ತಿಯ ಪ್ರಮಾಣವು 5.66 ಆಗಿದೆ. ಬ್ಯಾಂಕಿನ ಒಟ್ಟೂ ಗುಂತಾವಣಿಯು ರೂ.215 ಕೋಟಿ ಆಗಿದ್ದು, ವಷಾಂತ್ಯಕ್ಕೆ ಬ್ಯಾಂಕಿನ ಕಾಯ್ದಿಟ್ಟ ನಿಧಿಯು ರೂ.51 ಕೋಟಿ ಯಷ್ಟಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ರೂ.529 ಕೋಟಿ 14 ಲಕ್ಷವಾಗಿದ್ದು, ಬ್ಯಾಂಕಿನ ಒಟ್ಟೂ ವ್ಯವಹಾರವು ವರ್ಷಾಂತ್ಯಕ್ಕೆ ರೂ.705 ಕೋಟಿಯಷ್ಟಾಗಿದೆ. 2018-19 ನೇ ಸಾಲಿನಲ್ಲಿ ಬ್ಯಾಂಕು ಸದಸ್ಯರಿಗೆ ಶೇಕಡಾ 12 ಡಿವಿಡೆಂಡ್ನ್ನು ಘೋಷಿಸಿದೆ ಎಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಮ್. ಶೆಟ್ಟಿ, ಬ್ಯಾಂಕಿನ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಅಭಿಲಾಷೆಯಿಂದ ಬ್ಯಾಂಕು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಹೊಸ ತಂತ್ರಜ್ಞಾನದ ಸೇವೆಗಳನ್ನು ನಮ್ಮ ಗ್ರಾಹಕರು ಪಡೆಯುತ್ತಿದ್ದಾರೆ ಎಂದರು. ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ರಿಸೈಕ್ಲರ್ ಮೆಶಿನ್ನನ್ನು ಹೊಸದಾಗಿ ಅಳವಡಿಸಿದ್ದು, ಈ ಮೆಶಿನ್ ಮೂಲಕ ಗ್ರಾಹಕರು ಹಣವನ್ನು ಪಡೆಯುವುದಲ್ಲದೇ, ಹಣವನ್ನು ತಮ್ಮ ಖಾತೆಗೆ ತಾವೇ ಜಮಾ ಮಾಡುವ ಸೌಲಭ್ಯವೂ ಸಹ ಇದರಲ್ಲಿದೆ ಎಂಬ ಮಾಹಿತಿಯನ್ನು ನೀಡಿದರು ಹಾಗೂ ಮಹಾಸಭೆಯ ಎಜೆಂಡಾವನ್ನು ಮಂಡಿಸಿ ಸದಸ್ಯರಿಂದ ಒಪ್ಪಿಗೆಯನ್ನು ಪಡೆದರು.
ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಎನ್. ಹೆಗಡೆ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು. ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಶ್ರೀಧರ ನಾಯ್ಕ ವಂದಿಸಿದರು.