ಭಟ್ಕಳ: ಭಟ್ಕಳದಲ್ಲಿ ಎರಡು ಕೋವಿಡ್ ೧೯ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನಲೆಯಲ್ಲಿ ಸೋಮವಾರ ರಾತ್ರಿಯಿಂದಲೆ ಭಟ್ಕಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪಂಚಾಯತ್ ಸಿಇಒ ಎಂ. ರೋಷನ್ ಕ್ಷಣ ಕ್ಷಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ತುರ್ತು ಚಿಕಿತ್ಸಾ ಘಟಕಗಳನ್ನ ಸಿದ್ದಪಡಿಸಿಕೊಂಡು ಜಿಲ್ಲಾಡಳಿತ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ನಿರ್ಮಾಣಮಾಡಿದ್ದಾರೆ. ೪೦೦ ಜನರಿಗೆ ಚಿಕಿತ್ಸೆ ಕೊಡಲು ಸಿದ್ದತೆ ಮಾಡಿಕೊಂಡ ಜಿಲ್ಲಾಡಳಿತ ಸೋಂಕು ಹರಡದಂತೆ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಿ ೮೦ ತಂಡಗಳನ್ನ ರಚಿಸಿ ಪಟ್ಟಣದ ೨೨ ವಾರ್ಡ್ ಗಳಲ್ಲಿ ೯ ಸಾವಿರ ಮನೆಗಳ ತಪಾಸಣೆ ಕೈಗೊಳ್ಳಲಾಗಿದೆ.
ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾದೀತು; ಭಟ್ಕಳ ನಗರವು ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇಲ್ಲಿನವರು ಉದ್ಯೋಗವನ್ನು ಮಾಡಿಕೊಂಡಿದ್ದು ಚೈನಾದಲ್ಲಿಯೂ ಹಲವು ಜನರು ವ್ಯಾಪಾರವನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಜನರು ವಿದೇಶಗಳಿಂದ ಮರಳಿ ಬಂದಿದ್ದು ಆದಷ್ಟು ಜಾಗೃತೆಯನ್ನು ವಹಿಸದಿದ್ದರೆ ಮುಂದೆ ಪರಿಣಾಮ ಗಂಭೀರವಾದೀತು ಎಂಬ ಮಾತುಗಳು ಕೇಳಿ ಬರತೊಡಗಿವೆ. ಉ.ಕ. ಜಿಲ್ಲೆಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಈ ಸೋಂಕು ಭಟ್ಕಳದಲ್ಲಿ ಮೂರು ಮಂದಿಯಲ್ಲಿ ಕಾಣಿಸಿಕೊಂಡಿದ್ದು ಉ.ಕ ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಲು ಕಾರಣವಾಗಿದೆ. ಅಲ್ಲದೆ ಇಲ್ಲಿನ ಜನರು ಬೇಕಾಬಿಟ್ಟಿ ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡುತ್ತಿದ್ದು ತಂಡೋಪತಂಡವಾಗಿ ಪ್ರಾರ್ಥನಾ ಮಂದಿರಗಳಿಗೆ ಹೋಗುತ್ತಿದ್ದಾರೆ. ಸಮುದಾಯದ ಗಣ್ಯರು ಎಷ್ಟೇ ಜಾಗೃತಾ ಕ್ರಮವನ್ನು ಜರಗಿಸಿದರೂ ಕೂಡ ಜನರು ಐದು ಸಲ ಪ್ರಾರ್ಥನೆಗಾಗಿ ಗುಂಪುಗೂಡುತ್ತಿದ್ದು ಇದು ಇನ್ನಷ್ಟು ಆತಂಕವನ್ನು ಸೃಷ್ಟಿಸುವಂತೆ ಮಾಡಿದೆ. ಮಂಗಳವಾರ ಕೆಲ ಮಸೀದಿಗಳು ಬಾಗಿಲು ಹಾಕಿಕೊಂಡಿದ್ದು ಬಿಟ್ಟರೆ ೧೪೪ ಸೆಕ್ಷನ್ ಇದ್ದರೂ ಕೂಡ ಹಲವು ಮಸೀದಿಗಳಲ್ಲಿ ಎಂದಿನಂತೆ ಸಾಮೂಹಿಕ ಪ್ರಾರ್ಥನೆ ನೆರವೇರಿದ ಕುರಿತು ಮಾಹಿತಿ ದೊರಕಿದೆ. ಈ ಹಿನ್ನೆಲೆಯಲ್ಲಿ ಭಟ್ಕಳದ ಸಾಮಾಜಿಕ ರಾಜಕೀಯ ಸಂಸ್ಥೆಯ ಮುಖಂಡರು ಹಲವು ಬಾರಿ ವಿನಂತಿಸಿಕೊಂಡರು ಜನರು ಮಾತ್ರ ಕ್ಯಾರೆ ಅನ್ನದೆ ತಮ್ಮದೆ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಒಂದು ವೇಳೆ ಈಗಲೆ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಟ್ಕಳದ ಜನತೆ ಗಂಭೀರ ಪರಿಸ್ಥಿತಿಯನ್ನು ಎದರಿಸಬೇಕಾದೀತು ಎಂಬ ಎಚ್ಚರಿಕೆಯ ಮಾತುಗಳು ಕೂಡ ಕೇಳಿಬರುತ್ತಿವೆ.