ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆ. ಇನ್ನು ಒಂದುವರೆ ವರ್ಷ ಶಿರಸಿ-ಕುಮಟಾ ರಸ್ತೆ ಬಂದ್. ಅಕ್ಟೋಬರ್ 12 ರಿಂದ 18 ತಿಂಗಳು ಬಂದ್.
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆ ಮಾರ್ಗದಲ್ಲಿ ಇನ್ನು ಮುಂದೆ ಸಂಚರಿಸುವ ಪ್ಲ್ಯಾನ್ ಮಾಡಬೇಡಿ. ಯಾಕೆಂದರೆ ಇದೇ ಅಕ್ಟೋಬರ್ 12 ರಿಂದ 18 ತಿಂಗಳುಗಳ ಕಾಲ ರಸ್ತೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಾಗರಮಾಲಾ ಯೋಜನೆಯಡಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪ್ರಾರಂಭವಾಗಲಿದೆ.
ನ್ಯಾಶನಲ್ ಹೈವೆ ಪ್ರಾಧಿಕಾರವೂ ಈ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದೆ. ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.
ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.
ಇಲ್ಲಿ ರಸ್ತೆ ಬಂದ್ ಆಗುವುದರಿಂದ ಪರ್ಯಾಯ ಮಾರ್ಗದ ಬಗ್ಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶಿರಸಿಯಿಂದ ಕಾರವಾರ, ಅಂಕೋಲಾ ಹೋಗುವವರಿಗೆ ಯಲ್ಲಾಪುರದ ಮೇಲೆ ಎನ್ಎಚ್ 63ರಲ್ಲಿ ಸಂಚರಿಸಬಹುದಾಗಿದೆ.
ಹೊನ್ನಾವರ ಭಾಗದಿಂದ ಮಾವಿನಗುಂಡಿ ಮೂಲಕ ಸಾಗಿ ಸಿದ್ದಾಪುರ ತಲುಪಿ, ಅಲ್ಲಿಂದ ಶಿರಸಿಗೆ ಹೋಗಬಹುದು. ಶಿರಸಿಯಿಂದ ಕುಮಟಾ ಹೋಗುವವರು ಸಿದ್ದಾಪುರದ ಮೇಲೆ ಬಡಾಳ್ ಮೂಲಕ ಹೋಗುವಂತೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಉ.ಕ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ತಿಳಿಸಿದ್ದಾರೆ.